೩೫
ಸಬ್ಬತ್ ದಿನದ ನಿಯಮ
೧ ಮೋಶೆ ಇಸ್ರಾಯೇಲರ ಸಮೂಹವನ್ನೆಲ್ಲಾ ಸೇರಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಹೀಗೆ ಅಪ್ಪಣೆ ಮಾಡಿದ್ದಾನೆ. ೨ ಆರು ದಿನಗಳು ನೀವು ಕೆಲಸ ಮಾಡಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾಗಿರುವುದರಿಂದ ಅಂದು ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು; ಆ ದಿನದಲ್ಲಿ ಕೆಲಸಮಾಡುವವನಿಗೆ ಮರಣದಂಡನೆಯಾಗಬೇಕು; ೩ ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು” ಹೇಳಿದನು.
ದೇವದರ್ಶನ ಗುಡಾರದ ನಿರ್ಮಾಣಕ್ಕೆ ಬೇಕಾದ ವಸ್ತುಗಳು
೪ ಮೋಶೆಯು ಇಸ್ರಾಯೇಲ್ಯರ ಸರ್ವಸಮೂಹಕ್ಕೆ ಹೀಗೆಂದನು: “ಯೆಹೋವನು ಆಜ್ಞಾಪಿಸಿದ್ದೇನೆಂದರೆ, ೫ ನೀವು ನಿಮ್ಮ ನಿಮ್ಮೊಳಗೆ ಯೆಹೋವನಿಗಾಗಿ ಕಾಣಿಕೆಯನ್ನು ತೆಗೆದುಕೊಡಬೇಕು; ಒಳ್ಳೆಯ ಮನಸ್ಸಿರುವವರೆಲ್ಲರೂ ಕಾಣಿಕೆಯನ್ನು ತಂದುಕೊಡಬೇಕು. ಯೆಹೋವನಿಗೆ ತರಬೇಕಾದ ಆ ಕಾಣಿಕೆಯು ಎಂಥದಾಗಿರಬೇಕೆಂದರೆ; ಚಿನ್ನ, ಬೆಳ್ಳಿ, ತಾಮ್ರ ಎಂಬ ಲೋಹಗಳು, ೬ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಗಳು, ಉಣ್ಣೆಯ ಬಟ್ಟೆಗಳು, ೭ ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳು, ಕಡಲುಪ್ರಾಣಿಯ ತೊಗಲುಗಳು, ಜಾಲೀಮರವು, ದೀಪಕ್ಕೆ ಬೇಕಾದ ಎಣ್ಣೆಯು, ೮ ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು, ೯ ಏಫೋದ್ ಕವಚಕ್ಕೆ ಬೇಕಾಗಿರುವ ರತ್ನಗಳು ಹಾಗು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳು ಇವೇ.
೧೦ “ನಿಮ್ಮಲ್ಲಿರುವ ಜ್ಞಾನಿಗಳಾದ ಶಿಲ್ಪಿಗಳು ಬಂದು ಯೆಹೋವನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು. ೧೧ ಅವರು ಮಾಡಬೇಕಾದವುಗಳು ಯಾವುವೆಂದರೆ; ದೇವದರ್ಶನದ ಗುಡಾರ, ಅದರ ಮೇಲ್ಹೋದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆಕಲ್ಲುಗಳು, ೧೨ ಆಜ್ಞಾಶಾಸನಗಳ ಮಂಜೂಷ, ಅದನ್ನು ಹೊರುವ ಕಂಬಗಳು, ಕೃಪಾಸನ, ಅದನ್ನು ಮರೆಮಾಡುವ ಪರದೆ, ೧೩ ಮೇಜು, ಅದರ ಕಂಬಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ನೈವೇದ್ಯದ ರೊಟ್ಟಿಗಳು, ೧೪ ದೀಪಸ್ತಂಭ, ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ, ೧೫ ಧೂಪವೇದಿ, ಅದರ ಕಂಬಗಳು, ಅಭಿಷೇಕ ತೈಲ, ಪರಿಮಳಧೂಪದ್ರವ್ಯ, ಗುಡಾರದ ಬಾಗಿಲಿನ ಪರದೆ, ೧೬ ಯಜ್ಞವೇದಿ, ಅದರ ತಾಮ್ರದ ಜಾಳಿಗೆ, ಕಂಬಗಳು, ಉಪಕರಣಗಳು, ಬೋಗುಣಿ, ಅದರ ಪೀಠ, ೧೭ ಅಂಗಳದ ತೆರೆಗಳು, ಕಂಬಗಳು, ಗದ್ದಿಗೆಕಲ್ಲುಗಳು, ಅಂಗಳದ ಬಾಗಿಲಿನ ಪರದೆ, ೧೮ ಗುಡಾರದ ಗೂಟಗಳು, ಅಂಗಳದ ಗೂಟಗಳು, ಇವುಗಳ ಹಗ್ಗಗಳು, ೧೯ ಪವಿತ್ರಸ್ಥಾನದ ಸೇವೆಗೆ ಬೇಕಾದ ಸುಂದರವಾದ ದೀಕ್ಷಾವಸ್ತ್ರಗಳು ಅಂದರೆ ಮಹಾಯಾಜಕನಾದ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು ಇವೇ” ಅಂದನು.
೨೦ ಇಸ್ರಾಯೇಲರು ಮತ್ತು ಸಮೂಹದವರೆಲ್ಲರೂ ಮೋಶೆಯ ಎದುರಿನಿಂದ ಹೊರಟು ಹೋದರು. ೨೧ ಯಾರನ್ನು ಹೃದಯವು ಪ್ರೇರೇಪಿಸಿತೋ, ಯಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಸಮಸ್ತ ಸೇವೆಗಳಿಗಾಗಿಯೂ, ಪವಿತ್ರ ವಸ್ತ್ರಗಳಿಗಾಗಿಯೂ ಯೆಹೋವನಿಗೆ ಕಾಣಿಕೆಗಳನ್ನು ತಂದರು. ೨೨ ಸಿದ್ಧಚಿತ್ತರಾದ ಗಂಡಸರೂ, ಹೆಂಗಸರೂ ಬಂದು ಯೆಹೋವನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು. ೨೩ ಯಾರಲ್ಲಿ ನೀಲಿ, ನೇರಳೆ ಹಾಗು ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಯು, ಉಣ್ಣೆ ಬಟ್ಟೆಯು, ಹದಮಾಡಿದ ಕೆಂಪುಬಣ್ಣದ ಟಗರಿನ ತೊಗಲುಗಳು ಹಾಗು ಕಡಲುಪ್ರಾಣಿಯ ತೊಗಲುಗಳು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು. ೨೪ ಯಾರಲ್ಲಿ ಬೆಳ್ಳಿ ಇಲ್ಲವೇ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಯೆಹೋವನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲೀಮರವಿತ್ತೋ ಅವರು ಅದನ್ನು ತಂದುಕೊಟ್ಟರು. ೨೫ ನಿಪುಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ನೂಲನ್ನೂ, ಹತ್ತಿಯ ನೂಲನ್ನೂ ನೇಯ್ದು ಆ ನೂಲನ್ನು ತಂದುಕೊಟ್ಟರು. ೨೬ ಬುದ್ಧಿವಂತೆಯರಾದ ಬೇರೆ ಸ್ತ್ರೀಯರು ಆಡಿನ ಕೂದಲುಗಳನ್ನು ನೇಯ್ದು ತಂದುಕೊಟ್ಟರು. ೨೭ ಅಧಿಪತಿಗಳು ಏಫೋದ್ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ಎದೆಪದಕದಲ್ಲಿ ಇಡಬೇಕಾದ ರತ್ನಗಳನ್ನು, ೨೮ ದೀಪಕ್ಕೆ ಬೇಕಾದ ಎಣ್ಣೆಯನ್ನು ಹಾಗು ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳನ್ನು ತಂದುಕೊಟ್ಟರು. ೨೯ ಮೋಶೆಯ ಮೂಲಕ ಯೆಹೋವನು ಆಜ್ಞಾಪಿಸಿದ ಎಲ್ಲಾ ಕೆಲಸಕಾರ್ಯಗಳಿಗಾಗಿ ಆತನಿಗೆ ಕಾಣಿಕೆಗಳನ್ನು ತಂದುಕೊಡುವುದಕ್ಕೆ ಹೃದಯದಿಂದ ಪ್ರೇರೇಪಿತರಾಗಿ ಇಸ್ರಾಯೇಲ್ಯರ ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿಯೇ ತಂದುಕೊಟ್ಟರು.
ಗುಡಾರದ ಶಿಲ್ಪಿಗಳು
೩೦ ಮೋಶೆಯು ಇಸ್ರಾಯೇಲ್ಯರಿಗೆ ಹೀಗೆಂದನು, “ನೋಡಿರಿ, ಯೆಹೋವನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯ ಮಗನೂ ಆಗಿರುವ ಬೆಚಲೇಲನೆಂಬವನನ್ನು ಹೆಸರು ಹಿಡಿದು ಕರೆದಿದ್ದಾನೆ. ೩೧ ಕಲಾತ್ಮಕವಾದ ವಿನ್ಯಾಸಗಳನ್ನು ಕಲ್ಪಿಸುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ, ೩೨ ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸವನ್ನು ಮಾಡುವುದಕ್ಕೂ, ೩೩ ಅವನಿಗೆ ದೇವರಾತ್ಮವನ್ನು ಕೊಟ್ಟು ಅವನಿಗೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ. ೩೪ ಅದಲ್ಲದೆ ಮತ್ತೊಬ್ಬರಿಗೆ ಕಲಿಸಿಕೊಡುವುದಕ್ಕೆ ಸಹ ಅವನಿಗೂ ಮತ್ತು ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನಿಗೂ ವರಕೊಟ್ಟಿದ್ದೇನೆ. ೩೫ ಕಸೂತಿ ಕೆಲಸ ಕಲ್ಪಿಸುವವರು, ನೀಲಿ, ನೇರಳೆ ಕಡುಗೆಂಪು ವರ್ಣದ ದಾರದಿಂದಲೂ, ಹತ್ತಿಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲಾ ಕಸಬುದಾರರು ಮಾಡುವ ಕೆಲಸಗಳನ್ನು ಕಸಿಮಾಡುವುದಕ್ಕೂ ಯೆಹೋವನು ಅವರಿಗೆ ಜ್ಞಾನವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದಾನೆ.”