೩೭
ಒಣಗಿದ ಎಲುಬುಗಳ ಪುನರ್ಜೀವನ
೧ ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಲು, ಆತನು ತನ್ನ ಆತ್ಮದ ಮೂಲಕ ನನ್ನನ್ನು ಒಯ್ದು ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದನು. ೨ ನಾನು ಆ ಎಲುಬುಗಳ ಮಧ್ಯೆ ಕಣಿವೆಯನ್ನು ದಾಟಿ ಬರುವಂತೆ ಮಾಡಿದನು. ಇಗೋ! ಕಣಿವೆಯಲ್ಲಿ ಒಣಗಿ ಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು. ೩ ಆತನು ನನಗೆ “ನರಪುತ್ರನೆ, ಈ ಎಲುಬುಗಳಿಗೆ ಜೀವವು ಬರಬಹುದೋ?” ಎಂದು ಕೇಳಲು ನಾನು, “ಕರ್ತನಾದ ಯೆಹೋವನೇ, ನೀನೇ ಬಲ್ಲೆ” ಎಂದು ಉತ್ತರಕೊಟ್ಟೆನು.
೪ ಆಗ ಆತನು ನನಗೆ ಹೀಗೆ ಅಪ್ಪಣೆಮಾಡಿದನು, “ನೀನು ಈ ಎಲುಬುಗಳ ಮೇಲೆ ಪ್ರವಾದಿಸಿ, ಹೀಗೆ ನುಡಿ, ‘ಒಣಗಿದ ಎಲುಬುಗಳೇ, ಯೆಹೋವನ ವಾಕ್ಯವನ್ನು ಕೇಳಿರಿ’. ೫ ಕರ್ತನಾದ ಯೆಹೋವನು ನಿಮಗೆ ಹೀಗೆ ಹೇಳುತ್ತಾನೆ, ‘ಇಗೋ, ನಾನು ನಿಮ್ಮೊಳಗೆ ಶ್ವಾಸವನ್ನು ಊದುವೆನು; ನೀವು ಬದುಕುವಿರಿ. ೬ ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ, ಮಾಂಸವನ್ನು ತಂದು, ಚರ್ಮವನ್ನು ಹೊದಿಸಿ, ನಿಮ್ಮಲ್ಲಿ ಶ್ವಾಸವನ್ನು ತುಂಬುವೆನು; ಆಗ ನೀವು ಬದುಕಿ ನಾನೇ ಯೆಹೋವನು ಎಂದು ತಿಳಿದುಕೊಳ್ಳುವಿರಿ.’ ”
೭ ನನಗೆ ಅಪ್ಪಣೆಯಾದಂತೆ ನಾನು ಆ ಪ್ರವಾದನೆಯನ್ನು ನುಡಿಯುತ್ತಿರಲು, ಅಲ್ಲಿ ಟಕಟಕ ಶಬ್ದವಾಯಿತು, ಇಗೋ, ಅದು ಕದಲುತ್ತಿತ್ತು. ಎಲುಬುಗಳೆಲ್ಲಾ ಒಂದುಗೂಡಿ ಎಲುಬಿಗೆ ಎಲುಬು ಜೋಡನೆಯಾದವು. ೮ ನಾನು ನೋಡುತ್ತಿರುವಾಗ ಏನಾಶ್ಚರ್ಯ ಆಹಾ, ಅವುಗಳ ಮೇಲೆ ನರಗಳು ಹಬ್ಬಿಕೊಂಡವು, ಮಾಂಸವು ಹರಡಿಕೊಂಡಿತು, ಚರ್ಮವು ಮೇಲ್ಹೊದಿಕೆಯಾಯಿತು, ಶ್ವಾಸ ಮಾತ್ರ ಇರಲಿಲ್ಲ.
೯ ಆಗ ಆತನು ನನಗೆ, “ನರಪುತ್ರನೇ, ನೀನು ಶ್ವಾಸಕ್ಕೆ ನುಡಿ, ‘ಓ ಶ್ವಾಸವೇ,’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಚತುರ್ದಿಕ್ಕುಗಳಿಂದ ಬೀಸಿ, ಈ ಹತಶರೀರಗಳು ಬದುಕುವಂತೆ ಅವುಗಳ ಮೇಲೆ ಊದು.’ ” ೧೦ ನನಗೆ ಕೊಟ್ಟ ಅಪ್ಪಣೆಯಂತೆ ನಾನು ನುಡಿದು, ಶ್ವಾಸ ಊದಿದೆ. ಇಗೋ, ಉಸಿರು ಅವುಗಳಲ್ಲಿ ಬಂದಿತು, ಅವು ಬದುಕಿದವು, ಕಾಲೂರಿ ನಿಂತವು, ಅತ್ಯಂತ ಮಹಾ ಸೈನ್ಯವಾದವು.
೧೧ ಆಮೇಲೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಈ ಎಲುಬುಗಳು ಇಸ್ರಾಯೇಲಿನ ಮನೆತನಗಳೇ; ಇಗೋ, ಆ ಮನೆತನದವರು, ‘ಅಯ್ಯೋ, ನಮ್ಮ ಎಲುಬುಗಳು ಒಣಗಿಹೋದವು, ನಮ್ಮ ನಿರೀಕ್ಷೆಯು ಹಾಳಾಯಿತು; ನಾವು ಸಂಪೂರ್ಣವಾಗಿ ನಾಶವಾದೆವು’ ” ಅಂದುಕೊಳ್ಳುತ್ತಿದ್ದಾರೆ. ೧೨ ಆದಕಾರಣ ನೀನು ಈ ಪ್ರವಾದನೆಯನ್ನು ಅವರಿಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜನರೇ, ನೋಡಿರಿ, ನಾನು ನಿಮ್ಮ ಸಮಾಧಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರಾಯೇಲ್ ದೇಶಕ್ಕೆ ನಿಮ್ಮನು ತರುವೆನು. ೧೩ ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ ನಾನೇ ಯೆಹೋವನು ಎಂದು ನಿಮಗೆ ದೃಢವಾಗುವುದು. ೧೪ ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು; ಆಗ ಯೆಹೋವನಾದ ನಾನೇ ಇದನ್ನು ನುಡಿದು, ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ” ಇದು ಯೆಹೋವನ ಸಂಕಲ್ಪ.
ಇಸ್ರಾಯೇಲೂ ಯೆಹೂದವೂ ಒಂದಾಗುವುದು
೧೫ ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು, ೧೬ “ನರಪುತ್ರನೇ, ನೀನು ಒಂದು ಕೋಲನ್ನು ತೆಗೆದುಕೊಂಡು, ಅದರಲ್ಲಿ ಯೆಹೂದವ ಮತ್ತು ಯೆಹೂದಕ್ಕೆ ಸೇರಿದ ಇಸ್ರಾಯೇಲರದು ಎಂದು ಬರೆದು, ಇನ್ನೊಂದು ಕೋಲನ್ನು ತೆಗೆದುಕೊಂಡು ಅದರಲ್ಲಿ ಯೋಸೇಫಿನದು, ಎಫ್ರಾಯೀಮಿನದು, ಯೋಸೇಫಿಗೆ ಸೇರಿದ ಎಲ್ಲಾ ಇಸ್ರಾಯೇಲರದು ಎಂದು ಬರೆ. ೧೭ ಆ ಮೇಲೆ ಅವು ನಿನ್ನ ಕೈಯಲ್ಲಿ ಒಂದಾಗುವಂತೆ ಅವೆರಡನ್ನೂ ಒಂದಕ್ಕೊಂದು ಉದ್ದವಾಗಿ ಸೇರಿಸಿ ಹಿಡಿ.
೧೮ “ನಿನ್ನ ಜನರು, ‘ಇದೇನು? ನಮಗೆ ತಿಳಿಸುವುದಿಲ್ಲವೋ’ ಎಂದು ನಿನ್ನನ್ನು ಕೇಳುವಾಗ ನೀನು ಅವರಿಗೆ, ೧೯ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಇಗೋ, ಎಫ್ರಾಯೀಮು ಹಿಡಿದಿರುವ ದಂಡವನ್ನು ಅಂದರೆ ಯೋಸೇಫಿನ ಮತ್ತು ಯೋಸೇಫಿಗೆ ಸೇರಿದ ಇಸ್ರಾಯೇಲ್ ಕುಲಗಳ ಕೋಲನ್ನು ನಾನು ತೆಗೆದು, ಯೆಹೂದದ ಕೋಲಿಗೆ ಉದ್ದವಾಗಿ ಸೇರಿಸಿ, ಅವೆರಡನ್ನು ನನ್ನ ಕೈಯಲ್ಲಿ ಒಂದೇ ಕೋಲನ್ನಾಗಿ ಹಿಡಿಯುವೆನು ಎಂದು ಹೇಳು. ೨೦ ಹೇಳುವಾಗ ನೀನು ಹೆಸರು ಬರೆದಿರುವ ಕೋಲುಗಳು ಅವರ ಕಣ್ಣೆದುರಿಗೆ ನಿನ್ನ ಕೈಯಲ್ಲಿರಲಿ.’ ” ೨೧ ಇದನ್ನೂ ಅವರಿಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ಇಸ್ರಾಯೇಲರು ವಶವಾಗಿರುವ ಜನಾಂಗಗಳೊಳಗಿಂದ ನಾನು ಅವರನ್ನು ಉದ್ಧರಿಸಿ, ಎಲ್ಲಾ ಕಡೆಯಿಂದಲೂ ಒಟ್ಟಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು. ೨೨ ಅಲ್ಲಿ ಇಸ್ರಾಯೇಲಿನ ಪರ್ವತಗಳ ಮೇಲೆ ಒಂದೇ ಜನಾಂಗವನ್ನಾಗಿ ಮಾಡುವೆನು. ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು. ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿಯೂ, ಭಿನ್ನರಾಜ್ಯದವರಾಗಿಯೂ ಇರುವುದಿಲ್ಲ. ೨೩ ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ ತಮ್ಮನ್ನು ಇನ್ನು ಮುಂದೆ ಅಶುದ್ಧ ಮಾಡಿಕೊಳ್ಳುವುದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು. ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.
೨೪ “ನನ್ನ ಸೇವಕನಾದ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗೂ ಒಬ್ಬನೇ ಪಾಲಕನಿರುವನು ಮತ್ತು ಅವರು ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು. ೨೫ ನನ್ನ ಸೇವಕನಾದ ಯಾಕೋಬನಿಗೆ ನಾನು ದಯಪಾಲಿಸಿದ ದೇಶದಲ್ಲಿ ಅವರು ವಾಸಿಸುವರು; ಹೌದು, ನಿಮ್ಮ ಪಿತೃಗಳು ವಾಸಿಸಿದ ದೇಶದಲ್ಲಿ ಅವರೂ ಮತ್ತು ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು. ನನ್ನ ಸೇವಕನಾದ ದಾವೀದನು ಅವರಿಗೆ ಸದಾ ಅರಸನಾಗಿರುವನು. ೨೬ ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು. ೨೭ ಹೌದು, ನನ್ನ ವಾಸಸ್ಥಾನವು ಅವರ ಮಧ್ಯದಲ್ಲಿರುವುದು; ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು. ೨೮ ನನ್ನ ಪವಿತ್ರಾಲಯವು ಅವರ ಮಧ್ಯೆ ಶಾಶ್ವತವಾಗಿರುವಾಗ ಯೆಹೋವನಾದ ನಾನೇ ಇಸ್ರಾಯೇಲರನ್ನು ಪರಿಶುದ್ಧಗೊಳಿಸಿದೆನೆಂದು ಅನ್ಯಜನಾಂಗದವರು ತಿಳಿದುಕೊಳ್ಳುವರು.”