ನೋಹನೊಡನೆ ಒಡಂಬಡಿಕೆ
೧ ದೇವರು ನೋಹನನ್ನೂ, ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ. ೨ ಭೂಮಿಯ ಮೇಲಿರುವ ಎಲ್ಲಾ ಮೃಗಗಳೂ, ಆಕಾಶದ ಎಲ್ಲಾ ಪಕ್ಷಿಗಳೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ, ಸಮುದ್ರದ ಮೀನುಗಳೂ ನಿಮಗೆ ಹೆದರುವುವು. ನಾನು ಅವುಗಳನ್ನೆಲ್ಲಾ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ. ೩ ಭೂಮಿಯ ಮೇಲೆ ಚಲಿಸುವ ಎಲ್ಲಾ ಕ್ರಿಮಿಕೀಟಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಹಸಿರುಪಲ್ಯಗಳನ್ನು ನಿಮಗೆ ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ. ಸೈನ್ಯಾಧಿಪತಿ
೪ ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತದೊಂದಿಗೆ ನೀವು ತಿನ್ನಬಾರದು. ಏಕೆಂದರೆ ರಕ್ತದಲ್ಲಿ ಜೀವ ಇದೆ. ೫ ಇದಲ್ಲದೆ ನಿಮ್ಮ ರಕ್ತ ಸುರಿಸಿ ಜೀವ ತೆಗೆಯುವವನಿಗೆ ಮುಯ್ಯಿತೀರಿಸುವೆನು. ಮೃಗವಾಗಿದ್ದರೆ, ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿ ತೀರಿಸುವೆನು. ನರಹತ್ಯವು ಸಹೋದರ ಹತ್ಯವಲ್ಲವೇ?
೬ ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.
೭ ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯ ಮೇಲೆ ನಿಮಗೆ ಬಹುಸಂತಾನವಾಗಲಿ” ಎಂದು ಹೇಳಿದನು.
೮ ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ, ೯ “ಕೇಳಿರಿ ನಾನು ನಿಮ್ಮೊಂದಿಗೂ, ನಿಮ್ಮ ತರುವಾಯ ನಿಮ್ಮ ಸಂತತಿಯವರೊಂದಿಗೂ, ಒಡಂಬಡಿಕೆ ಮಾಡಿಕೊಳ್ಳುವೆನು. ೧೦ ನಿಮ್ಮೊಂದಿಗೆ ನಾವೆಯಿಂದ ಹೊರಟು ಬಂದ ಪಶು ಪಕ್ಷಿ, ಮೃಗ, ಸಕಲ ಭೂಜಂತುಗಳೊಂದಿಗೂ ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ. ೧೧ ಆ ಒಡಂಬಡಿಕೆ ಯಾವುದೆಂದರೆ, ಇನ್ನು ಮೇಲೆ ಯಾವ ಪ್ರಾಣಿಗಳೂ ಜಲಪ್ರಳಯದಿಂದ ನಾಶವಾಗುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಜಲಪ್ರಳಯವು ಬರುವುದೇ ಇಲ್ಲ” ಎಂದು ಹೇಳಿದನು.
೧೨ ದೇವರು ಪುನಃ ಹೇಳಿದ್ದೇನಂದರೆ, “ನಾನು ನಿಮ್ಮನ್ನೂ ನಿಮ್ಮ ಸಂಗಡ ಇರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಲ್ಲಿಯೂ ಮಾಡುವ ಈ ಒಡಂಬಡಿಕೆಗೆ ಮೇಘಗಳಲ್ಲಿ ನಾನು ಇಟ್ಟಿರುವ ಈ ಕಾಮನಬಿಲ್ಲೇ ಗುರುತಾಗಿರುವುದು. ೧೩ ನನಗೂ ಭೂಜೀವಿಗಳಿಗೂ ಮಾಡಿಕೊಂಡ ಒಡಂಬಡಿಕೆಗೆ ಇದೇ ಗುರುತಾಗಿರಲಿ. ೧೪ ನಾನು ಭೂಲೋಕದ ಮೇಲೆ ಮೇಘಗಳನ್ನು ಕವಿಸುವಾಗ ಆ ಕಾಮನಬಿಲ್ಲು ಮೇಘಗಳಲ್ಲಿ ಕಂಡುಬರುವುದು. ೧೫ ಆಗ ನಾನು ನಿಮ್ಮನ್ನೂ, ಎಲ್ಲಾ ಜೀವರಾಶಿಗಳನ್ನೂ ಕುರಿತು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಮುಂದೆ ನೀರು ಹೆಚ್ಚಿ ಎಲ್ಲಾ ಭೂಜೀವಿಗಳನ್ನು ಹಾಳುಮಾಡುವ ಪ್ರಳಯವಾಗುವುದಿಲ್ಲ. ೧೬ ಆ ಕಾಮನಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಆದ ಶಾಶ್ವತವಾದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು” ಅಂದನು.
೧೭ ಮತ್ತು ದೇವರು ನೋಹನಿಗೆ, “ನನಗೂ ಎಲ್ಲಾ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು” ಎಂದು ಹೇಳಿದನು.
ಶೇಮ್ ಯೆಫೆತರಿಗೆ ಸಿಕ್ಕ ಆಶೀರ್ವಾದ, ಕಾನಾನ್ಯರಿಗೆ ದೊರೆತ ಶಾಪ
೧೮ ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಯಾರೆಂದರೆ ಶೇಮ್, ಹಾಮ್, ಯೆಫೆತ್. ಹಾಮನು ಕಾನಾನನ ತಂದೆಯು. ೧೯ ಈ ಮೂವರು ನೋಹನ ಮಕ್ಕಳು. ಇವರಿಂದಲೇ ಜನರು ಉತ್ಪತ್ತಿಯಾಗಿ ಭೂಮಿಯಲ್ಲೆಲ್ಲಾ ಹರಡಿಕೊಂಡರು.
೨೦ ನೋಹನು ವ್ಯವಸಾಯಗಾರನಾಗಿದ್ದನು; ದ್ರಾಕ್ಷಿ ತೋಟ ಮಾಡುವುದನ್ನು ಮೊದಲು ಪ್ರಾರಂಭಿಸಿದವನು ಇವನೇ. ೨೧ ಒಂದು ದಿನ ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು. ೨೨ ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವುದನ್ನು ಕಂಡು, ಹೊರಗಿದ್ದ ತನ್ನ ಸಹೋದರರಾದ ಶೇಮ್ ಮತ್ತು ಯೆಫೆತರಿಗೆ ತಿಳಿಸಿದನು. ೨೩ ಆಗ ಶೇಮ್ ಮತ್ತು ಯೆಫೆತರು ಕಂಬಳಿಯನ್ನು ತೆಗೆದುಕೊಂಡು ತಮ್ಮಿಬ್ಬರ ಬೆನ್ನಿನ ಮೇಲೆ ಹಾಕಿಕೊಂಡು ಹಿಂಭಾಗವಾಗಿ ನಡೆದು ತಂದೆಗೆ ಹೊದಿಸಿ ಅವನ ಬೆತ್ತಲೆತನವನ್ನು ಮುಚ್ಚಿದರು. ಅವರು ಹಿಮ್ಮುಖರಾಗಿದ್ದುದ್ದರಿಂದ ತಂದೆಯು ಬೆತ್ತಲೆಯಾಗಿದ್ದದ್ದನ್ನು ನೋಡಲಿಲ್ಲ.
೨೪ ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚೆತ್ತು ಕಿರಿಯ ಮಗನು ಮಾಡಿದ್ದನ್ನು ತಿಳಿದು, ೨೫ “ಕಾನಾನನು
ಶಾಪಗ್ರಸ್ತನಾಗಲಿ.
ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ” ಎಂದನು.
೨೬ ಅವನು ಇನ್ನೂ ನುಡಿದದ್ದೇನೆಂದರೆ,
“ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ;
ಕಾನಾನನು ಅವರಿಗೆ ದಾಸನಾಗಿರಲಿ.
೨೭ ಯೆಫೆತನ ಮೇರೆಯನ್ನು ದೇವರು ವಿಸ್ತರಿಸಲಿ,
ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ,
ಕಾನಾನನು ಅವರಿಗೆ ದಾಸನಾಗಿರಲಿ” ಎಂದನು.
೨೮ ಪ್ರಳಯವಾದ ಮೇಲೆ ನೋಹನು ಮುನ್ನೂರೈವತ್ತು ವರ್ಷ ಬದುಕಿದನು. ೨೯ ನೋಹನು ಒಂಭೈನೂರ ಐವತ್ತು ವರ್ಷ ಬದುಕಿ ಸತ್ತನು.