೨೮
ಯಾಕೋಬನು ಹೆಣ್ಣನ್ನು ತೆಗೆದುಕೊಂಡದ್ದು
೧ ಆಗ ಇಸಾಕನು ಯಾಕೋಬನನ್ನು ಕರೆದು ಆಶೀರ್ವದಿಸಿ ಅವನಿಗೆ ಆಜ್ಞಾಪಿಸಿದ್ದೇನೆಂದರೆ, “ನೀನು ಕಾನಾನ್ಯರ ಹೆಣ್ಣನ್ನು ಮದುವೆಯಾಗಬಾರದು. ೨ ಪದ್ದನ್ ಅರಾಮ್ ದೇಶದಲ್ಲಿರುವ ನಿನ್ನ ತಾಯಿಯ ತಂದೆಯಾದ ಬೆತೂವೇಲನ ಮನೆಗೆ ಹೊರಟು ಹೋಗು. ಅಲ್ಲಿ ನಿನ್ನ ತಾಯಿಯ ಸಹೋದರನಾದ ಲಾಬಾನನ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೋ. ೩ ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನಿನಗೆ ಬಹಳ ಸಂತತಿಯನ್ನು ಕೊಟ್ಟು ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ. ೪ ದೇವರು ಅಬ್ರಹಾಮನಿಗೆ ಕೊಟ್ಟಿರುವ ಆಶೀರ್ವಾದವನ್ನು ನಿನಗೂ, ನಿನ್ನ ಸಂತತಿಗೂ ಕೊಡಲಿ, ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಹಾಗೆ, ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಸ್ವಾಸ್ತ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ” ಎಂದನು. ೫ ಇಸಾಕನು ಯಾಕೋಬನನ್ನು ಕಳುಹಿಸಿದಾಗ ಅವನು ಪದ್ದನ್ ಅರಾಮನಲ್ಲಿದ್ದ ಯಾಕೋಬನ ಮತ್ತು ಏಸಾವನ ತಾಯಿಯಾದ ರೆಬೆಕ್ಕಳ ಅಣ್ಣನಾದ ಅರಾಮಿನವನಾದ ಬೆತೂವೇಲನ ಮಗನಾಗಿದ್ದ ಲಾಬಾನನ ಬಳಿಗೆ ಹೋದನು.
೬ ಇಸಾಕನು ಯಾಕೋಬನನ್ನು ಆಶೀರ್ವದಿಸಿ ಪದ್ದನ್ ಅರಾಮಿನಲ್ಲಿ ಹೆಣ್ಣನ್ನು ಹುಡುಕಿ ಮದುವೆ ಮಾಡಿಕೊಳ್ಳಲು ಕಳುಹಿಸಿದ್ದನ್ನೂ, ಅವನು ಯಾಕೋಬನನ್ನು ಆಶೀರ್ವದಿಸುವಾಗ ಅವನಿಗೆ, ನೀನು ಕಾನಾನ್ಯರ ಹೆಣ್ಣನ್ನು ತೆಗೆದುಕೊಳ್ಳಬಾರದೆಂದು ಅಪ್ಪಣೆಕೊಟ್ಟದ್ದನ್ನೂ, ಏಸಾವನು ನೋಡಿದನು. ೭ ಯಾಕೋಬನು ತನ್ನ ತಂದೆತಾಯಿಗಳ ಮಾತಿಗೆ ವಿಧೇಯನಾಗಿ ಪದ್ದನ್ ಅರಾಮಿಗೆ ಹೋದದ್ದನ್ನೂ ಸಹ ಏಸಾವನು ನೋಡಿದನು. ೮ ಕಾನಾನ್ಯರ ಹೆಣ್ಣು ಮಕ್ಕಳು ತನ್ನ ತಂದೆಯಾದ ಇಸಾಕನಿಗೆ ಇಷ್ಟವಿಲ್ಲವೆಂದು ಏಸಾವನು ತಿಳಿದುಕೊಂಡನು. ೯ ಏಸಾವನು ಇಷ್ಮಾಯೇಲನ ಬಳಿಗೆ ಹೋಗಿ ಅಬ್ರಹಾಮನ ಮಗನೂ ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿರುವ ಮಹಲತಳನ್ನು ಮದುವೆ ಮಾಡಿಕೊಂಡನು.
ಯಾಕೋಬನ ಕನಸು
೧೦ ಆಗ ಯಾಕೋಬನು ಹಾರಾನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು. ೧೧ ಅವನು ಪ್ರಯಾಣಾರ್ಥವಾಗಿ ಹೋಗುತ್ತಿರುವಾಗ ಹೊತ್ತು ಮುಳುಗಿದ್ದರಿಂದ ಆ ರಾತ್ರಿ ಅಲ್ಲಿಯೇ ಉಳಿದುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲಿ ಮಲಗಿಕೊಂಡನು. ೧೨ ಆ ರಾತ್ರಿ ಅವನು ಒಂದು ಕನಸು ಕಂಡನು. ಆ ಕನಸಿನಲ್ಲಿ ಒಂದು ಏಣಿಯು ಭೂಮಿಯ ಮೇಲೆ ನಿಂತಿತು. ಅದರ ತುದಿ ಆಕಾಶವನ್ನು ಮುಟ್ಟಿತು. ಅದರ ಮೇಲೆ ದೇವ ದೂತರು ಏರುತ್ತಾ ಇಳಿಯುತ್ತಾ ಇದ್ದರು. ೧೩ ಇದಲ್ಲದೆ ಯೆಹೋವನು ಅದರ ಮೇಲೆ ನಿಂತುಕೊಂಡು, “ನಿನ್ನ ತಂದೆಯಾದ ಅಬ್ರಹಾಮನ ದೇವರೂ, ಇಸಾಕನ ದೇವರೂ ಆಗಿರುವ ಯೆಹೋವನು ನಾನೇ. ನೀನು ಮಲಗಿರುವ ಭೂಮಿಯನ್ನು ನಿನಗೂ, ನಿನ್ನ ಸಂತತಿಗೂ ಕೊಡುವೆನು. ೧೪ ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಅಸಂಖ್ಯವಾಗುವುದು. ನೀನು ಪೂರ್ವ, ಪಶ್ಚಿಮ, ದಕ್ಷಿಣ ಉತ್ತರ ದಿಕ್ಕುಗಳಿಗೆ ಹರಡಿಕೊಳ್ಳುವಿ. ನಿನ್ನಿಂದಲೂ, ನಿನ್ನ ಸಂತತಿಯಿಂದಲೂ, ಭೂಮಿಯ ಎಲ್ಲಾ ಕುಲದವರು ಆಶೀರ್ವಾದ ಹೊಂದುವರು. ೧೫ ಇಗೋ, ನಾನು ನಿನ್ನ ಸಂಗಡ ಇದ್ದು ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ, ಪುನಃ ಈ ದೇಶಕ್ಕೆ ಬರಮಾಡುವೆನು. ಏಕೆಂದರೆ ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸದ ಹೊರತು ಬಿಡುವುದಿಲ್ಲ” ಎಂದನು.
೧೬ ಯಾಕೋಬನು ನಿದ್ದೆಯಿಂದ ಎಚ್ಚೆತ್ತು, “ನಿಜವಾಗಿ ಯೆಹೋವನು ಈ ಸ್ಥಳದಲ್ಲಿ ನೆಲೆಸಿದ್ದಾನೆ. ಇದು ನನಗೆ ತಿಳಿಯದೆ ಹೋಯಿತು” ಎಂದನು. ೧೭ ಅವನು ಭಯಪಟ್ಟವನಾಗಿ, “ಈ ಸ್ಥಳವು ಪವಿತ್ರವಾದ್ದದು. ಇದು ದೇವರ ಮನೆಯೇ ಹೊರತು ಬೇರೆಯಲ್ಲ, ಇದು ಪರಲೋಕದ ಬಾಗಿಲು” ಎಂದನು.
೧೮ ಯಾಕೋಬನು ಬೆಳಗ್ಗೆ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಸ್ತಂಭವಾಗಿ ನಿಲ್ಲಿಸಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು. ೧೯ ಇದಲ್ಲದೆ ಅವನು ಆ ಸ್ಥಳಕ್ಕೆ “ಬೇತೇಲ್” ಎಂದು ಹೆಸರಿಟ್ಟನು. ಅದಕ್ಕಿಂತ ಮೊದಲು ಆ ಪಟ್ಟಣಕ್ಕೆ “ಲೂಜ್” ಎಂದು ಹೆಸರಿತ್ತು.
೨೦ ಯಾಕೋಬನು ಅಲ್ಲಿ ಪ್ರಮಾಣ ಮಾಡಿ, “ದೇವರು ನನ್ನ ಸಂಗಡ ಇದ್ದು ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ ಉಣ್ಣುವುದಕ್ಕೆ ಆಹಾರವನ್ನೂ, ಉಡುವುದಕ್ಕೆ ವಸ್ತ್ರವನ್ನೂ, ನನಗೆ ಕೊಟ್ಟು, ೨೧ ತಿರುಗಿ ನನ್ನನ್ನು ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಬರಮಾಡಿದರೆ ಯೆಹೋವನೇ ನನಗೆ ದೇವರಾಗಿರುವನು. ೨೨ ಇದಲ್ಲದೆ ನಾನು ಸ್ತಂಭವಾಗಿ ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗುವುದು. ಆಗ ನೀನು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು” ಎಂದು ಹರಕೆಮಾಡಿಕೊಂಡನು.