ದೇವರ ಪುತ್ರವಾತ್ಸಲ್ಯ
೧೧
೧ ಇಸ್ರಾಯೇಲ್ ಇನ್ನೂ ಬಾಲ್ಯದಲ್ಲಿದ್ದಾಗ ನಾನು ಅದರ ಮೇಲೆ ಪ್ರೀತಿಯಿಟ್ಟು, ಆ ನನ್ನ ಮಗನನ್ನು ಐಗುಪ್ತ ದೇಶದಿಂದ ಕರೆದೆನು.
೨ ಪ್ರವಾದಿಗಳು ಕರೆದ ಹಾಗೆಲ್ಲಾ ನನ್ನ ಜನರು ದೂರದೂರ ಹೋಗುತ್ತಲೇ ಬಂದರು.
ಬಾಳ್ ದೇವತೆಗಳಿಗೆ ಯಜ್ಞಮಾಡಿ, ಬೊಂಬೆಗಳಿಗೆ ಧೂಪ ಹಾಕಿದರು.
೩ ನಾನೇ ಎಫ್ರಾಯೀಮಿಗೆ ನಡೆದಾಟವನ್ನು ಕಲಿಸಿದೆನು; ಅದನ್ನು ಕೈಯಲ್ಲಿ ಎತ್ತಿಕೊಂಡೆನು.
ತನ್ನನ್ನು ಸ್ವಸ್ಥಮಾಡಿದವನು ನಾನೇ ಎಂದು ಅದಕ್ಕೆ ತಿಳಿಯಲಿಲ್ಲ.
೪ ನಾನು ನನ್ನ ಜನರನ್ನು ಮಾನವರಿಗೆ ತಕ್ಕ ಮೂಗುದಾರದಿಂದ, ಅಂದರೆ ಮಮತೆಯ ಹಗ್ಗದಿಂದ ಸೆಳೆದುಕೊಂಡೆನು.
ನೊಗವನ್ನು ತಲೆಯ ಈಚೆಗೆ ತೆಗೆಯುವವರಂತೆ ನಾನು ಅವರನ್ನು ಸುದಾರಿಸಿ,
ಅವರಿಗೆ ಆಹಾರವನ್ನು ಉಣಿಸಿದೆನು.
೫ ಇಸ್ರಾಯೇಲ್ ಐಗುಪ್ತ ದೇಶಕ್ಕೆ ಹಿಂದಿರುಗದು;
ಅದು ನನ್ನ ಕಡೆಗೆ ಹಿಂದಿರುಗಲು ಒಪ್ಪದ ಕಾರಣ ಅಶ್ಶೂರವೇ ಅದಕ್ಕೆ ರಾಜನಾಗಬೇಕು.
೬ ಅದರ ದುರಾಲೋಚನೆಗಳ ನಿಮಿತ್ತ ಖಡ್ಗವು ಅದರ ಪಟ್ಟಣಗಳ ಮೇಲೆ ಬೀಸಲ್ಪಟ್ಟು,
ಅಲ್ಲಿನ ಕೋಟೆಗಳನ್ನು ಧ್ವಂಸಮಾಡಿ ನುಂಗಿಬಿಡುವುದು.
೭ ನನ್ನ ಕಡೆಯಿಂದ ತಿರಿಗಿಕೊಳ್ಳುವುದು ನನ್ನ ಜನರ ಗುಣವೇ;
ಅವರನ್ನು ಮೇಲಕ್ಕೆ ಕರೆಯುವವರು ಇದ್ದರೂ, ಮೇಲಕ್ಕೆತ್ತುವವರು ಯಾರೂ ಇಲ್ಲ.
೮ ಎಫ್ರಾಯೀಮೇ, ನಾನು ನಿನ್ನನ್ನು ಹೇಗೆ ತ್ಯಜಿಸಲಿ! ಇಸ್ರಾಯೇಲೇ, ಹೇಗೆ ನಿನ್ನನ್ನು ಕೈಬಿಡಲಿ!
ಅಯ್ಯೋ, ನಿನ್ನನ್ನು ಅದ್ಮಾದ ಗತಿಗೆ ಹೇಗೆ ತರಲಿ! ಚೆಬೋಯಿಮಿನಂತೆ ಹೇಗೆ ನಾಶಮಾಡಲಿ!
ನನ್ನ ಮನಸ್ಸು ನನ್ನೊಳಗೆ ತಿರುಗಿತು, ಕರುಳು ತೀರಾ ಮರುಗಿತು.
೯ ನನ್ನ ಉಗ್ರಕೋಪವನ್ನು ತೀರಿಸೆನು, ಎಫ್ರಾಯೀಮನ್ನು ನಾಶಮಾಡಲು ತಿರಿಗಿಕೊಳ್ಳೆನು.
ನಾನು ಮನುಷ್ಯನಲ್ಲ, ದೇವರೇ; ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿ, ನಾನು ರೋಷದಿಂದ ಬಾರೆನು.
೧೦ ಸಿಂಹದಂತೆ ಗರ್ಜಿಸುತ್ತಿರುವ ಯೆಹೋವನನ್ನು ಆತನ ಜನರು ಹಿಂಬಾಲಿಸುವರು;
ಆತನು ಆರ್ಭಟಿಸಲು ಆತನ ಮಕ್ಕಳು ಪಶ್ಚಿಮದಿಂದ ನಡಗುತ್ತಾ ಬರುವರು;
೧೧ ಗುಬ್ಬಿಗಳಂತೆ ಐಗುಪ್ತದಿಂದಲೂ, ಪಾರಿವಾಳಗಳಂತೆ ಅಶ್ಶೂರದಿಂದಲೂ ಅದರುತ್ತಾ ತ್ವರೆಪಡುವರು;
ಅವರು ತಮ್ಮ ತಮ್ಮ ನಿವಾಸಗಳಲ್ಲಿ ವಾಸಿಸುವಂತೆ ಮಾಡುವೆನು; ಇದು ಯೆಹೋವನ ನುಡಿ.
ಮೂಲಪಿತೃವಿನ ದೃಷ್ಟಾಂತದಿಂದ ಇಸ್ರಾಯೇಲನ್ನು ಎಚ್ಚರಿಸಿದ್ದು
೧೨ ಎಫ್ರಾಯೀಮು ಸುಳ್ಳಿನಿಂದಲೂ, ಇಸ್ರಾಯೇಲ್ ವಂಶವು ಮೋಸದಿಂದಲೂ ನನ್ನನ್ನು ಮುತ್ತಿಕೊಂಡಿವೆ;
ಯೆಹೂದವು ಸತ್ಯಸಂಧನೂ, ಸದಮಲಸ್ವಾಮಿಯೂ ಆದ ದೇವರ ಕಡೆಯಿಂದ ಇನ್ನೂ ಅಲೆದಾಡುತ್ತಿದೆ.