೧ ಆ ಮೇಲೆ ಯೋಬನು ಪ್ರತ್ಯುತ್ತರವಾಗಿ ಇಂತೆಂದನು,
೨ “ನೀನು ಹೇಳಿದ್ದು ಸತ್ಯವೇ ಸರಿ.
ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವುದು ಹೇಗೆ?
೩ ಆತನೊಂದಿಗೆ ವ್ಯಾಜ್ಯಮಾಡಬೇಕೆಂದು ಇಷ್ಟಪಟ್ಟರೂ,
ಆತನ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಕೊಡಲಾರನು.
೪ ದೇವರ ಹೃದಯವು ವಿವೇಕವುಳ್ಳದ್ದು, ಆತನ ಶಕ್ತಿಯು ಪ್ರಬಲವಾದದ್ದು.
ಆತನ ವಿರುದ್ಧವಾಗಿ ಮನಸ್ಸು ಕಠಿಣಮಾಡಿಕೊಂಡವನು ಸಾರ್ಥಕನಾದದ್ದುಂಟೇ?
೫ ಆತನು ಪರ್ವತಗಳನ್ನು ಅರಿಯದಂತೆ ಸರಿಸಿ
ಕೋಪದಿಂದ ಅವುಗಳನ್ನು ಉರುಳಿಸುತ್ತಾನೆ.
೬ ಭೂಲೋಕವನ್ನು ಕದಲಿಸಿ
ಅದರ ಸ್ತಂಭಗಳನ್ನು ನಡುಗಿಸುತ್ತಾನೆ.
೭ ಹುಟ್ಟಬೇಡವೆಂದು ಆತನು ಅಪ್ಪಣೆ ಕೊಟ್ಟರೆ ಸೂರ್ಯನು ಹುಟ್ಟುವುದಿಲ್ಲ;
ನಕ್ಷತ್ರಗಳನ್ನು ಮುಚ್ಚಿಟ್ಟು ಮುದ್ರೆಹಾಕುತ್ತಾನೆ.
೮ ಆಕಾಶಮಂಡಲವನ್ನು ವಿಶಾಲಪಡಿಸಿದವನು ಆತನೊಬ್ಬನೇ.
ಅಲ್ಲಕಲ್ಲೋಲವಾದ ಸಮುದ್ರದ ಮೇಲೆ ನಡೆಯುತ್ತಾನೆ.
೯ ನಕ್ಷತ್ರಮಂಡಲವನ್ನೂ, ಮೃಗಶಿರವನ್ನೂ, ಕೃತ್ತಿಕೆಯನ್ನೂ,
ದಕ್ಷಿಣ ದಿಕ್ಕಿನ ನಕ್ಷತ್ರಗೃಹಗಳನ್ನೂ ನಿರ್ಮಿಸಿದವನು ಆತನೇ.
೧೦ ಅಪ್ರಮೇಯ ಮಹಾಕಾರ್ಯಗಳನ್ನೂ,
ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.
೧೧ ಆಹಾ, ಆತನು ನನ್ನ ಪಕ್ಕದಲ್ಲಿ ದಾಟಿಹೋದರೂ ನಾನು ಕಾಣುವುದಿಲ್ಲ;
ಮುಂದಕ್ಕೆ ಹಾದುಹೋದರೂ ನನಗೆ ತಿಳಿಯುವುದಿಲ್ಲ.
೧೨ ಇಗೋ ಹಿಡಿದುಕೊಳ್ಳುತ್ತಾನೆ, ಆತನನ್ನು ತಳ್ಳುವವರು ಯಾರು?
‘ನೀನು ಏನು ಮಾಡುತ್ತಿ?’ ಎಂದು ಆತನನ್ನು ಕೇಳುವವರಾರು?
 
೧೩ ದೇವರು ತನ್ನ ಸಿಟ್ಟನ್ನು ತೊಲಗಿಸಿಬಿಡುವುದಿಲ್ಲ;
ರಾಹಾಬನ ಸಹಾಯಕರು ಆತನಿಗೆ ಅಡ್ಡಬಿದ್ದರಲ್ಲಾ.
೧೪ ನಾನಾದರೋ ದೇವರೊಂದಿಗೆ ವಾದಿಸಿ,
ಆತನಿಗೆ ಉತ್ತರಕೊಡುವುದಕ್ಕೆ ಮತ್ತೂ ಅಶಕ್ತನು.
೧೫ ನಾನು ನೀತಿವಂತನಾಗಿದ್ದರೂ ಉತ್ತರಕೊಡೆನು;
ಆದರೆ ನನ್ನ ನ್ಯಾಯಾಧಿಪತಿಗೆ ಮೊರೆಯಿಡುವೆನು.
೧೬ ನಾನು ಕರೆದಾಗ ಆತನು ನನಗೆ ಕಾಣಿಸಿಕೊಂಡಿದ್ದರೂ,
ನನ್ನ ವಿಜ್ಞಾಪನೆಯನ್ನು ಲಾಲಿಸುವನೆಂದು ನಂಬುತ್ತಿರಲಿಲ್ಲ.
೧೭ ಆತನು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾ,
ಸುಮ್ಮಸುಮ್ಮನೆ ಒಂದರ ಮೇಲೊಂದು ಗಾಯಮಾಡುತ್ತಾ,
೧೮ ಉಸಿರಾಡಗೊಡಿಸದೆ ಕಹಿಯಾದ ಪದಾರ್ಥದಿಂದ
ನನ್ನ ಹೊಟ್ಟೆಯನ್ನು ತುಂಬಿಸುತ್ತಾನೆ.
೧೯ ನಾನು ಬಲಿಷ್ಠನ ಶಕ್ತಿಯನ್ನು ಮೊರೆಹೋಗುವೆನೆಂದರೆ ದೇವರು, ‘ಇಗೋ, ಇದ್ದೇನೆ’ ಎನ್ನುವನು.
ನ್ಯಾಯವಿಚಾರಣೆಯು ಆಗಲಿ ಎಂದರೆ ಆತನು ನನಗೆ, ‘ಕಾಲ ನಿಯಾಮಕರು ಯಾರು?’ ಎನ್ನುವನು.
೨೦ ನಾನು ನೀತಿವಂತನಾಗಿದ್ದರೂ ನನ್ನ ಬಾಯೇ ನನ್ನನ್ನು ಅಪರಾಧಿಯೆಂದು ತೋರ್ಪಡಿಸುವುದು.
ನಾನು ನಿರ್ದೋಷಿಯಾಗಿದ್ದರೂ ಆತನು ನನ್ನನ್ನು ದುರ್ಮಾರ್ಗಿಯೆಂದು ನಿರೂಪಿಸುವನು.
೨೧ ನಾನು ನಿರ್ದೋಷಿಯೇ ಹೌದು; ನನ್ನ ವಿಷಯದಲ್ಲಿ ನನಗೇನೂ ಚಿಂತೆಯಿಲ್ಲ;
ನನ್ನ ಪ್ರಾಣವನ್ನು ತಿರಸ್ಕರಿಸುತ್ತೇನೆ.
೨೨ ಎಲ್ಲಾ ಒಂದೇ. ಆದಕಾರಣ ‘ನಾನು,
ನಿರ್ದೋಷಿಯನ್ನೂ, ದೋಷಿಯನ್ನೂ ಆತನು ನಾಶ ಮಾಡುತ್ತೇನೆ’ ಎಂದು ಹೇಳುತ್ತಾನೆ.
೨೩ ವಿಪತ್ತು ಅಕಸ್ಮಾತ್ತಾಗಿ ಜನರನ್ನು ಸಂಹರಿಸಲು,
ನಿರ್ಮಲಚಿತ್ತರು ಮನಗುಂದುವುದನ್ನು ಆತನು ನೋಡಿ ಹಾಸ್ಯಮಾಡುವನು.
೨೪ ಭೂಲೋಕವು ದುಷ್ಟರ ಕೈ ಸೇರಿದೆ;
ಲೋಕದ ನ್ಯಾಯಾಧಿಪತಿಗಳ ಮುಖಗಳಿಗೆ ಮುಸುಕು ಹಾಕಿದ್ದಾನೆ.
ಇದನ್ನು ಮಾಡಿದವನು ಆತನಲ್ಲದೆ ಮತ್ತೆ ಯಾರು?
೨೫ ನನ್ನ ದಿನಗಳು ಓಟಗಾರನಿಗಿಂತ ಶೀಘ್ರವಾಗಿರುತ್ತವೆ.
ಯಾವ ಸುಖವನ್ನೂ ಕಾಣದೆ ಓಡಿ ಹೋಗುತ್ತವೆ.
೨೬ ಬೆಂಡಿನ ದೋಣಿಗಳು ದಾಟಿ ಹೋಗುವಂತೆಯೂ,
ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ವೇಗವಾಗಿ ಗತಿಸಿ ಹೋಗುತ್ತವೆ.
೨೭ ನಾನು ನನ್ನ ಪ್ರಲಾಪವನ್ನು ಮರೆತುಬಿಟ್ಟು,
ಕಳೆಗುಂದಿದ ನನ್ನ ಮುಖವನ್ನು ಮಾರ್ಪಡಿಸಿಕೊಂಡು ಹರ್ಷಿಸುವೆನೆಂದು ಮನಸ್ಸು ಮಾಡಿದರೆ,
೨೮ ನನ್ನ ಎಲ್ಲಾ ಸಂಕಟಗಳಿಂದ ನನಗೆ ಭಯವುಂಟಾಗುತ್ತದೆ;
ನೀನು ನನ್ನನ್ನು ನಿರ್ದೋಷಿಯೆಂದು ಎಣಿಸುವುದಿಲ್ಲವೆಂದು ತಿಳಿದುಕೊಳ್ಳುತ್ತೇನೆ.
೨೯ ನಾನು ಅಪರಾಧಿಯೆಂದು ನಿರ್ಣಯಿಸಲ್ಪಡಬೇಕಷ್ಟೆ.
ನಾನು ವ್ಯರ್ಥವಾಗಿ ಪ್ರಯಾಸಪಡುವುದೇಕೆ?
೩೦ ನಾನು ಹಿಮದಿಂದ ಸ್ನಾನಮಾಡಿದರೂ,
ನನ್ನ ಕೈಗಳನ್ನು ಶುಚಿ ಮಾಡಿಕೊಂಡರೂ,
೩೧ ನೀನು ನನ್ನನ್ನು ಗುಂಡಿಯಲ್ಲಿ ಮುಳುಗಿಸಿ,
ನನ್ನ ಬಟ್ಟೆಗಳಿಗೆ ನಾನು ಅಸಹ್ಯನಾಗುವಂತೆ ಮಾಡುವಿ.
೩೨ ಆತನು ನನ್ನಂಥವನಲ್ಲ, ಮನುಷ್ಯನಲ್ಲ,
ನಾನು ಆತನೊಂದಿಗೆ ವಾದಿಸುವುದು ಹೇಗೆ? ನಾವಿಬ್ಬರೂ ನ್ಯಾಯಾಸನದ ಮುಂದೆ ಕೂಡುವುದು ಹೇಗೆ?
೩೩ ನಮ್ಮಿಬ್ಬರ ಮೇಲೆ ಕೈಯಿಡುವವನಾಗಿಯೂ,
ಮಧ್ಯಸ್ಥನಾಗಿಯೂ ಇರುವ ನ್ಯಾಯಾಧಿಪತಿಯು ಯಾರೂ ಇಲ್ಲ.
೩೪ ನನ್ನ ಮೇಲೆ ಎತ್ತಿರುವ ತನ್ನ ದಂಡವನ್ನು ಆತನು ತೆಗೆದುಹಾಕಲಿ,
ಆತನಿಂದಾಗುವ ದಿಗಿಲು ನನ್ನನ್ನು ಹೆದರಿಸದಿರಲಿ.
೩೫ ಹೀಗಿದ್ದರೆ ನಾನು ಭಯಪಡದೆ ಮಾತನಾಡುವೆನು;
ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.”