೧೧
೧ ಆಗ ನಾಮಾಥ್ಯನಾದ ಚೋಫರನು ಹೀಗೆಂದನು,
೨ “ಬಹಳ ಮಾತುಗಳಿಗೆ ಉತ್ತರ ಕೊಡಬಾರದೋ?
ವ್ಯರ್ಥವಾಗಿ ಮಾತಾಡುವವ ನೀತಿವಂತನೆಂದು ಹೇಳಿಸಿಕೊಂಡಾನೇ?
೩ ನೀನು ಬಡಾಯಿಕೊಚ್ಚಿದರೆ ಮನುಷ್ಯರು ಸುಮ್ಮನಿರಬೇಕೋ?
ನೀನು ಕುಚೋದ್ಯವಾಗಿ ಮಾತನಾಡುವಾಗ ನಿನ್ನನ್ನು ಯಾರೂ ನಾಚಿಕೆಗೆ ಒಳಪಡಿಸಬಾರದೋ?
೪ ‘ನನ್ನ ಬೋಧನೆಯು ನಿರ್ಮಲವಾದದ್ದು,
ದೇವದೃಷ್ಟಿಯಲ್ಲಿ ಶುದ್ಧನಾಗಿದ್ದೇನೆ’ ಎಂದು ನೀನು ಹೇಳಿದ್ದೀಯಲ್ಲಾ.
೫ ಆಹಾ, ದೇವರು ಬಾಯ್ದೆರೆದು
ನಿನ್ನ ವಿರುದ್ಧವಾಗಿ ಮಾತನಾಡಿದರೆ ಎಷ್ಟೋ ಉತ್ತಮ!
೬ ಆತನು ಜ್ಞಾನದ ರಹಸ್ಯಗಳನ್ನು ನಿನಗೆ ತಿಳಿಸಿ,
ಸುಜ್ಞಾನವು ಬಹುಮುಖವಾಗಿದೆ ಎಂದು ತೋರಿಸಿಕೊಟ್ಟರೆ ಎಷ್ಟೋ ಲೇಸು!
ದೇವರು ನಿನ್ನ ಅಧರ್ಮವನ್ನೆಲ್ಲಾ ಗಣನೆಗೆ ತರಲಿಲ್ಲವೆಂದು ತಿಳಿದುಕೋ!
೭ ದೇವರ ಅಗಾಧಗಳನ್ನು ಕಂಡುಕೊಳ್ಳಬಲ್ಲೆಯಾ?
ಸರ್ವಶಕ್ತನನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಬಹುದೋ?
೮ ಆಹಾ, (ಆತನ ಜ್ಞಾನವು) ಆಕಾಶದ ಹಾಗೆ ಉನ್ನತವಾಗಿದೆ; ನೀನು ಮಾಡುವುದೇನು?
ಪಾತಾಳಕ್ಕಿಂತ ಆಳವಾಗಿದೆ; ನೀನು ತಿಳಿದುಕೊಳ್ಳುವುದೇನು?
೯ ಅದರ ಅಳತೆಯು ಭೂಮಿಗಿಂತಲೂ ಉದ್ದವಾಗಿದೆ,
ಸಮುದ್ರಕ್ಕಿಂತಲೂ ಅಗಲವಾಗಿದೆ.
೧೦ ಆತನು ಹಾದುಹೋದರೂ, ಸೆರೆಯಲ್ಲಿಟ್ಟರೂ,
ನ್ಯಾಯವಿಚಾರಣೆಗೆ ಕರೆದರೂ ಆತನನ್ನು ತಳ್ಳಿಬಿಡುವವರು ಯಾರು?
೧೧ ಆತನೇ ವ್ಯರ್ಥ ಜನರನ್ನು ತಿಳಿದುಕೊಳ್ಳುವನು;
ಯಾವ ವಿಮರ್ಶೆಯೂ ಇಲ್ಲದೆ ಅಧರ್ಮವನ್ನು ಕಂಡು ಹಿಡಿಯುವನು.
೧೨ ಕಾಡುಕತ್ತೆಯ ಮರಿಗೆ ನರಜನ್ಮವಾದರೆ
ಅವಿವೇಕಿಯಾದ ಮನುಷ್ಯನು ವಿವೇಕವನ್ನು ಪಡೆಯುವನು.
 
೧೩ ನೀನಂತು ಮನಸ್ಸನ್ನು ಪರಿವರ್ತಿಸಿಕೊಂಡು
ದೇವರ ಕಡೆಗೆ ಕೈಗಳನ್ನೆತ್ತಿ ಸ್ತುತಿಸು.
೧೪ ಅಧರ್ಮವು ನಿನ್ನ ಕೈಯಲ್ಲಿದ್ದರೆ ಅದನ್ನು ದೂರಮಾಡಿಬಿಡು;
ಅನ್ಯಾಯವು ನಿನ್ನ ಗುಡಾರಗಳಲ್ಲಿ ವಾಸಿಸದಿರಲಿ.
೧೫ ಆಗ ನೀನು ನಿಷ್ಕಳಂಕವಾದ ಮುಖವನ್ನೆತ್ತಿಕೊಂಡು,
ಸ್ಥಿರಚಿತ್ತನೂ, ನಿರ್ಭಯನೂ ಆಗಿರುವಿ.
೧೬ ನಿನ್ನ ಕಷ್ಟವನ್ನು ಮರೆತುಬಿಡುವಿ;
ಹರಿದುಹೋದ ನೀರನ್ನೋ ಎಂಬಂತೆ ಅದನ್ನು ಜ್ಞಾಪಿಸಿಕೊಳ್ಳುವಿ.
೧೭ ನಿನ್ನ ಜೀವಮಾನವು ಮಧ್ಯಾಹ್ನದ ಬೆಳಕಿಗಿಂತ ಹೆಚ್ಚಾಗಿ ಪ್ರಜ್ವಲಿಸುವುದು,
ಕತ್ತಲಿದ್ದರೂ ಹಗಲಿನಂತಿರುವುದು.
೧೮ ನಿರೀಕ್ಷೆಗೆ ಆಸ್ಪದವಿರುವುದರಿಂದ ಧೈರ್ಯಗೊಂಡಿರುವಿ,
ಸುತ್ತಲೂ ನೋಡಿ ಅಪಾಯವಿಲ್ಲವೆಂದು ವಿಶ್ರಮಿಸಿಕೊಳ್ಳುವಿ.
೧೯ ಮಲಗಿಕೊಂಡಾಗ ನಿನ್ನನ್ನು ಯಾರೂ ಹೆದರಿಸುವುದಿಲ್ಲ.
ಅನೇಕರು ನಿನ್ನ ಮುಖ ಪ್ರಸನ್ನತೆಯನ್ನು ಅಪೇಕ್ಷಿಸುವರು.
೨೦ ಆದರೆ ದುಷ್ಟರು ನಿರಾಶ್ರಯರಾಗಿ ಕಂಗೆಡುವರು,
ಪ್ರಾಣಬಿಡಬೇಕೆಂಬುದೇ ಅವರ ಬಯಕೆ.”