೨೨
೧ ಆ ಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು,
೨ “ಮನುಷ್ಯ ಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು?
ಒಬ್ಬನು ವಿವೇಕಿಯಾಗಿ ನಡೆದುಕೊಂಡರೆ ಅವನಿಗೇ ಪ್ರಯೋಜನವಷ್ಟೆ.
೩ ನೀನು ನೀತಿವಂತನಾಗಿರುವುದು ಸರ್ವಶಕ್ತನಿಗೆ ಸುಖವೋ?
ನಿನ್ನ ನಡತೆಯನ್ನು ಸರಿಪಡಿಸಿಕೊಂಡರೆ ಆತನಿಗೇನು ಲಾಭ?
೪ ನಿನ್ನ ಭಯಭಕ್ತಿಗಾಗಿಯೇ ಆತನು ನಿನ್ನನ್ನು ಶಿಕ್ಷಿಸಿ
ನ್ಯಾಯತೀರ್ಪಿಗೆ ಗುರಿಮಾಡುತ್ತಾನೋ?
೫ ನಿನ್ನ ಕೆಟ್ಟತನವು ಬಹಳವಲ್ಲವೇ?
ನಿನ್ನ ಪಾಪಗಳಿಗೆ ಮಿತಿಯೇ ಇಲ್ಲವಲ್ಲಾ?
 
೬ ನೋಡು, ನಿನ್ನ ಸಹೋದರನಿಂದ ಸುಮ್ಮನೆ ಒತ್ತೆಯಾಳುಗಳನ್ನು ತೆಗೆದುಕೊಂಡಿದ್ದಿ,
ಬೆತ್ತಲೆಯವರ ಬಟ್ಟೆಯನ್ನೂ ಸೆಳಕೊಂಡಿದ್ದಿ.
೭ ಬಳಲಿದವನಿಗೆ ನೀರು ಕೊಡದೆ,
ಹಸಿದವನಿಗೆ ಅನ್ನಕೊಡದೆ ಹೋಗಿದ್ದಿ.
೮ ಬಲಿಷ್ಠನಾದರೆ ದೇಶವೇ ಅವನದು,
ಅಲ್ಲಿ ಸನ್ಮಾನ ಯೋಗ್ಯನಾಗಿ ವಾಸಿಸತಕ್ಕವನು ಅವನೇ.
೯ ನೀನು ವಿಧವೆಯರನ್ನು ಬರಿಗೈಯಾಗಿ ಕಳುಹಿಸಬಿಟ್ಟು,
ಅನಾಥರ ಕೈಗಳನ್ನು ಮುರಿದಿದ್ದಿ.
೧೦ ಆದಕಾರಣ ಬೋನುಗಳು ನಿನ್ನ ಸುತ್ತಲು ಕಾದಿವೆ,
ಫಕ್ಕನೆ ಉಂಟಾದ ಭಯವು ನಿನ್ನನ್ನು ತಲ್ಲಣಗೊಳಿಸುತ್ತದೆ.
೧೧ ಇದಲ್ಲದೆ ದಾರಿಕಾಣದಂತೆ ಕತ್ತಲೂ, ಮುಸುಕಿ
ಜಲಪ್ರವಾಹವೂ ನಿನ್ನನ್ನು ಆವರಿಸುತ್ತವೆ.
 
೧೨ ದೇವರು ಉನ್ನತ ಆಕಾಶದಲ್ಲಿಲ್ಲವೋ?
ನಕ್ಷತ್ರಮಂಡಲದ ತುದಿಯು ಎಷ್ಟೋ ಎತ್ತರ, ನೋಡು!
೧೩ ನೀನಾದರೋ, ‘ದೇವರಿಗೆ ಏನು ಗೊತ್ತು?
ಕಾರ್ಗತ್ತಲಿನ ಆಚೆಯಿಂದ ನ್ಯಾಯತೀರಿಸಬಲ್ಲನೋ?
೧೪ ದಟ್ಟವಾದ ಮೋಡಗಳು ಆತನಿಗೆ ಪರದೆಯ ಹಾಗಿರುವುದರಿಂದ ನೋಡಲಾರನು;
ಆಕಾಶಮಂಡಲದ ಮೇಲೆ ನಡೆದಾಡುತ್ತಾನೆ’ ಎಂದು ಹೇಳಿಕೊಂಡೆಯಲ್ಲವೇ.
 
೧೫ ಕೆಟ್ಟವರು ಮೊದಲಿನಿಂದಲೂ,
ನಡೆದ ದಾರಿಯನ್ನು ನೀನು ಹಿಡಿಯುವಿಯಾ?
೧೬ ಅಕಾಲ ಮರಣವು ಅವರನ್ನು ಅಪಹರಿಸಿತು,
ಅವರಿಗೆ ಆಧಾರವಾಗಿದ್ದ ನೆಲವು ನೀರಾಗಿ ಹರಿಯಿತು.
೧೭ ಅವರು ಆತನನ್ನು ಕುರಿತು, ‘ನಮ್ಮಿಂದ ತೊಲಗಿ ಹೋಗು,
ಸರ್ವಶಕ್ತನು ನಮಗೇನು ಮಾಡಾನು’ ಎಂದು ಹೇಳಿಕೊಳ್ಳುತ್ತಿದ್ದರು.
೧೮ ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದನು.
ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
೧೯ ನೀತಿವಂತರು ಇದನ್ನು ನೋಡಿ ಹಿಗ್ಗುವರು,
ನಮ್ಮ ವಿರುದ್ಧವಾಗಿ ಎದ್ದವರು ಹಾಳಾಗಿಯೇ ಹೋದರು.
೨೦ ‘ಅವರ ಉಳಿದ ಸೊತ್ತನ್ನು ಬೆಂಕಿಯು ನಾಶಮಾಡಿತು’ ಎಂದು,
ನಿರ್ದೋಷಿಗಳು ದುಷ್ಟರನ್ನು ಅಣಕಿಸುವರು.
 
೨೧ ದೇವರ ಚಿತ್ತಕ್ಕೆ ಒಳಪಟ್ಟು ಸಮಾಧಾನ ಹೊಂದು,
ಇದರಿಂದ ನಿನಗೆ ಶುಭವಾಗುವುದು.
೨೨ ಆತನ ಬಾಯಿಂದಲೇ ಬೋಧನೆಯನ್ನು ಸ್ವೀಕರಿಸಿ,
ಆತನ ಮಾತುಗಳನ್ನು ಹೃದಯದಲ್ಲಿ ಇಟ್ಟುಕೋ.
೨೩ ನೀನು ಸರ್ವಶಕ್ತನ ಕಡೆಗೆ ತಿರುಗಿಕೊಂಡು,
ನಿನ್ನ ಗುಡಾರಗಳಿಂದ ಅನ್ಯಾಯವನ್ನು ದೂರಮಾಡಿದರೆ ಉದ್ಧಾರವಾಗುವಿ.
೨೪ ನಿನ್ನ ಚಿನ್ನವನ್ನು ಧೂಳಿನಲ್ಲಿ ಹಾಕು,
ಓಫೀರ್ ದೇಶದ ಅಪರಂಜಿಯನ್ನು ಹೊಳೆಗಳ ಬಂಡೆಗಳಿಗೆ ಎಸೆದುಬಿಡು.
೨೫ ಸರ್ವಶಕ್ತನು ನಿನಗೆ ಚಿನ್ನವಾಗಿಯೂ, ಬೆಳ್ಳಿಯ ರಾಶಿಗಳಾಗಿಯೂ ಇರುವನು.
೨೬ ಆಗ ನೀನು ಸರ್ವಶಕ್ತನಲ್ಲಿ ಆನಂದಪಟ್ಟು,
ದೇವರ ಅಭಿಮುಖನಾಗಿರುವೆ.
೨೭ ನೀನು ಪ್ರಾರ್ಥಿಸುವಿ, ಆತನು ಲಾಲಿಸುವನು,
ಆತನಿಗೆ ಹರಕೆಗಳನ್ನು ಒಪ್ಪಿಸುವಿ.
೨೮ ಯಾವುದನ್ನು ಸಂಕಲ್ಪಿಸಿಕೊಳ್ಳುವಿಯೋ ಅದು ನಿನಗೆ ನೆರವೇರುವುದು,
ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.
೨೯ ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ಮೇಲಕ್ಕೆ ಎತ್ತಲ್ಪಡುವೆನು ಅಂದುಕೊಳ್ಳುವಿ,
ಆಗ ದೀನದೃಷ್ಟಿಯುಳ್ಳ ನಿನ್ನನ್ನು ಆತನು ರಕ್ಷಿಸುವನು.
೩೦ ನಿರ್ದೋಷಿಯನ್ನು ಆತನು ತಪ್ಪಿಸುವನು,
ಹೌದು, ಆತನು ಇಂಥವನನ್ನು ತಪ್ಪಿಸುವುದಕ್ಕೆ ನಿನ್ನ ಕೈಗಳ ಪರಿಶುದ್ಧತೆಯೇ ಕಾರಣವಾಗಿರುವುದು.”