ಯೇಸು ಆಶ್ಚರ್ಯಕರವಾದ ರೀತಿಯಿಂದ ಮೀನುಗಳನ್ನು ದೊರಕಿಸಿಕೊಟ್ಟು ಶಿಷ್ಯರನ್ನು ಆಯ್ಕೆ ಮಾಡಿಕೊಂಡದ್ದು
೧ ಒಂದಾನೊಂದು ದಿವಸ ಜನರು ಗುಂಪಾಗಿ ಬಂದು ಯೇಸುವನ್ನು ಸುತ್ತುವರೆದು ದೇವರ ವಾಕ್ಯವನ್ನು ಕೇಳುತ್ತಿರಲು ೨ ಗೆನೇಜರೆತ್ ಕೆರೆಯ ದಡದಲ್ಲಿ ನಿಂತಿದ್ದ ಆತನು ಆ ಕೆರೆಯ ದಡದಲ್ಲಿ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ೩ ಆ ದೋಣಿಗಳಲ್ಲಿ ಸೀಮೋನನ ಒಂದು ದೋಣಿಯನ್ನು ಯೇಸು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಆ ಜನರ ಗುಂಪಿಗೆ ಉಪದೇಶಮಾಡಿದನು. ೪ ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ - ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ ಮೀನುಹಿಡಿಯಲು ನಿಮ್ಮ ಬಲೆಗಳನ್ನು ಬೀಸಿರಿ ಎಂದು ಹೇಳಿದನು. ೫ ಅದಕ್ಕೆ ಸೀಮೋನನು - ಗುರುವೇ, ನಾವು ರಾತ್ರಿಯೆಲ್ಲಾ ಪ್ರಯತ್ನಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಬೀಸುತ್ತೇವೆ ಅಂದನು. ೬ ಅವರು ಬಲೆಗಳನ್ನು ಬೀಸಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಬಲೆಗೆ ಸಿಕ್ಕಿಕೊಂಡಿದ್ದರ ಪರಿಣಾಮ ಬಲೆಗಳು ಹರಿದುಹೋಗುವಂತ್ತಿದವು. ೭ ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸಂಗಡಿಗರನ್ನೂ ಕರೆದು - ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನುಗಳನ್ನು ತುಂಬಿಸಲು ಅವು ಮುಳುಗುವ ಹಾಗಾದವು. ೮ ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು ಕರ್ತನೇ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗಬೇಕು ಅಂದನು. ೯ ಯಾಕೆಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿಮಿತ್ತ ಆಶ್ಚರ್ಯದಿಂದ ಬೆರಗಾದರು; ೧೦ ಸೀಮೋನನ ಸಂಗಡಿಗರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಹಾಗೆಯೇ ಆಶ್ಚರ್ಯಪಟ್ಟರು. ಯೇಸು ಸೀಮೋನನಿಗೆ - ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವವನಾಗಿರುವಿ ಎಂದು ಹೇಳಿದನು. ೧೧ ಅವರು ತಮ್ಮ ದೋಣಿಗಳನ್ನು ತಂದು ದಡಕ್ಕೆ ಬಿಟ್ಟು ಮತ್ತು ಎಲ್ಲವನ್ನು ಬಿಟ್ಟು ಅಂದಿನಿಂದ ಯೇಸುವನ್ನು ಹಿಂಬಾಲಿಸಿದರು.
ಯೇಸು ಕುಷ್ಠರೋಗಿಯನ್ನು ವಾಸಿಮಾಡಿದ್ದು
(ಮತ್ತಾಯನು 8:2-4; ಮಾರ್ಕ 1:40-45)
೧೨ ಆತನು ಒಂದಾನೊಂದು ಊರಿನಲ್ಲಿದ್ದಾಗ ಮೈಯೆಲ್ಲಾ ಕುಷ್ಠರೋಗ ತುಂಬಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಅಡ್ಡ ಬಿದ್ದು - ಸ್ವಾಮಿ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ಎಂದು ಬೇಡಿಕೊಂಡನು. ೧೩ ಆತನು ಕೈನೀಡಿ ಅವನನ್ನು ಮುಟ್ಟಿ - ನನಗೆ ಮನಸ್ಸುಂಟು; ಶುದ್ಧನಾಗು ಅಂದನು. ಕೂಡಲೆ ಅವನ ಕುಷ್ಠವು ವಾಸಿಯಾಯಿತು. ೧೪ ಆಗ ಆತನು ಅವನಿಗೆ - ನೀನು ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ಆಜ್ಞೆ ಮಾಡಿರಿವ ಕಾಣಿಕೆಯನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು, ಅದು ಜನರಿಗೆ ಸಾಕ್ಷಿಯಾಗಲಿ ಎಂದು ಅಪ್ಪಣೆಕೊಟ್ಟನು. ೧೫ ಆದರೂ ಆತನ ಸುದ್ದಿಯು ಮತ್ತಷ್ಟು ಹಬ್ಬಿತು; ಮತ್ತು ಜನರು ಯೇಸುವಿನ ಉಪದೇಶವನ್ನು ಕೇಳುವದಕ್ಕೂ ತಮ್ಮ ತಮ್ಮ ಜಾಡ್ಯಗಳನ್ನು ವಾಸಿಮಾಡಿಸಿಕೊಳ್ಳುವುದಕ್ಕೂ ಗುಂಪುಗುಂಪಾಗಿ ಬಂದು ಸೇರಿದರು. ೧೬ ಆದರೆ ಯೇಸು ಜನರಿಂದ ಪ್ರತ್ಯೇಕಿಸಿಕೊಂಡು ಅರಣ್ಯ ಪ್ರದೇಶಗಳಿಗೆ ಹೋಗಿ ಪ್ರಾರ್ಥನೆಯನ್ನು ಮಾಡುತ್ತಿದ್ದನು.
ಯೇಸು ಪಾರ್ಶ್ವವಾಯುರೋಗಿಯ ಪಾಪವನ್ನು ಕ್ಷಮಿಸಿ ಅವನನ್ನು ಗುಣಮಾಡಿದ್ದು
(ಮತ್ತಾಯನು 9:2-8; ಮಾರ್ಕ 2:1-12)
೧೭ ಒಂದಾನೊಂದು ದಿನದಲ್ಲಿ ಆತನು ಉಪದೇಶಮಾಡುತ್ತಿರಲು ಗಲಿಲಾಯ ಮತ್ತು ಯೂದಾಯದ ಎಲ್ಲಾ ಗ್ರಾಮಗಳಿಂದಲೂ ಯೆರೂಸಲೇಮಿನಿಂದಲೂ ಬಂದಿದ್ದ ಫರಿಸಾಯರೂ ನ್ಯಾಯಶಾಸ್ತ್ರಿಗಳು ಆತನ ಹತ್ತಿರ ಕೂತುಕೊಂಡಿದ್ದರು. ಮತ್ತು ಅವರನ್ನು ಗುಣಮಾಡುವ ದೇವರ ಶಕ್ತಿಯು ಆತನಲ್ಲಿತ್ತು. ೧೮ ಹೀಗಿರುವಲ್ಲಿ ಕೆಲವು ಮಂದಿ ಗಂಡಸರು ಒಬ್ಬ ಪಾರ್ಶ್ವವಾಯುರೋಗದವನನ್ನು ಮಂಚದ ಮೇಲೆ ಹೊತ್ತುಕೊಂಡು ಬಂದರು; ಅವನನ್ನು ಒಳಗೆ ತೆಗೆದುಕೊಂಡು ಹೋಗಿ ಆತನ ಮುಂದೆ ಇರಿಸಬೇಕೆಂದು ಪ್ರಯತ್ನಿಸಿದರೂ ೧೯ ಜನರ ಗುಂಪು ದಟ್ಟವಾಗಿದ್ದ ಕಾರಣ ಅವನನ್ನು ಒಳಗೆ ತೆಗೆದುಕೊಂಡುಹೋಗುವ ಮಾರ್ಗವನ್ನು ಕಾಣದೆ ಮನೆಯ ಮೇಲೆ ಹತ್ತಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯ ಸಹಿತವಾಗಿ ಜನರ ನಡುವೆ ಯೇಸುವಿನ ಮುಂದೆ ಇಳಿಸಿದರು. ೨೦ ಯೇಸು ಅವರ ನಂಬಿಕೆಯನ್ನು ನೋಡಿ - ಅವನಿಗೆ ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು. ೨೧ ಅದಕ್ಕೆ ಆ ಶಾಸ್ತ್ರಿಗಳೂ ಮತ್ತು ಫರಿಸಾಯರೂ - ಧರ್ಮನಿಂದೆಯ ಮಾತನ್ನಾಡುವ ಇವನು ಎಷ್ಟರವನು? ಪಾಪಗಳನ್ನು ಕ್ಷಮಿಸಲು ದೇವರೊಬ್ಬನಿಂದ ಹೊರತು ಮತ್ತಾರಿಂದಾದೀತು ಎಂದು ಅಂದುಕೊಳ್ಳುತ್ತಿದ್ದರು. ೨೨ ಆದರೆ ಅವರು ಹಾಗಂದುಕೊಳ್ಳುವುದನ್ನು ಯೇಸುವು ತಿಳಿದುಕೊಂಡು ಅವರಿಗೆ - ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುವದೇನು? ೨೩ ಯಾವದು ಸುಲಭ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವದೋ? ಎದ್ದು ನಡೆ ಅನ್ನುವದೋ? ೨೪ ಆದರೆ ಪಾಪಗಳನ್ನು ಕ್ಷಮಿಸುವುದಕ್ಕೆ ಮನುಷ್ಯ ಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ ಆ ಪಾರ್ಶ್ವವಾಯು ರೋಗದವನನ್ನು ನೋಡಿ - ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗೆಂದು ಹೇಳಿದನು. ೨೫ ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ಮನೆಗೆ ಹೋದನು. ೨೬ ನೋಡಿದವರೆಲ್ಲರೂ ಬೆರಗಾಗಿ ದೇವರನ್ನು ಕೊಂಡಾಡಿದರು; ಮತ್ತು ಅವರು ಭಯ ಹಿಡಿದವರಾಗಿ - ನಾವು ಈ ಹೊತ್ತು ಅಪೂರ್ವ ಸಂಗತಿಯನ್ನು ಕಂಡೆವು ಅಂದರು.
ಯೇಸು ಪಾಪಿಷ್ಠರ ಸಂಗಡ ಊಟಮಾಡಿದ್ದಕ್ಕೆ ಹಾಗೂ ತನ್ನ ಶಿಷ್ಯರು ಉಪವಾಸ ಮಾಡದೆಹೋದದ್ದಕ್ಕೆ ಕಾರಣ ತಿಳಿಸಿದ್ದು
(ಮತ್ತಾಯನು 9:9-17; ಮಾರ್ಕ 2:13-22)
೨೭ ನಂತರ ಆತನು ಹೊರಟು ಸುಂಕಕ್ಕೆ ಕುಳಿತಿದ್ದ ಲೇವಿಯೆಂಬ ಒಬ್ಬ ಸುಂಕದವನನ್ನು ಕಂಡು - ನನ್ನನ್ನು ಹಿಂಬಾಲಿಸು ಎಂದು ಅವನನ್ನು ಕರೆಯಲು ೨೮ ಅವನು ಎಲ್ಲವನ್ನೂ ಬಿಟ್ಟು ಎದ್ದು ಆತನ ಹಿಂದೆ ಹೋದನು. ೨೯ ತರುವಾಯ ಲೇವಿಯು ತನ್ನ ಮನೆಯಲ್ಲಿ ಆತನಿಗೆ ಒಂದು ದೊಡ್ಡ ಔತಣವನ್ನು ಮಾಡಿರಲು ಸುಂಕದವರೂ ಇತರರೂ ಗುಂಪಾಗಿ ಕೂಡಿ ಬಂದು ಅವರ ಸಂಗಡ ಊಟಕ್ಕೆ ಕುಳಿತುಕೊಂಡಿದ್ದರು. ೩೦ ಅದನ್ನು ಕಂಡು ಫರಿಸಾಯರೂ ಅವರಲ್ಲಿದ್ದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗುಣುಗುಟ್ಟುತ್ತಾ - ನೀವು ಸಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುವದೇಕೆ ಎಂದು ಕೇಳಿದರು. ೩೧ ಅದಕ್ಕೆ ಯೇಸು - ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು; ೩೨ ದೇವರ ಕಡೆಗೆ ತಿರುಗಿಕೊಳ್ಳಿರಿ, ನೀತಿವಂತರನ್ನು ಕರೆಯುವುದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.
೩೩ ಅವರು ಆತನಿಗೆ - ಯೋಹಾನನ ಶಿಷ್ಯರು ಪದೇಪದೇ ಉಪವಾಸದಿಂದ ವಿಜ್ಞಾಪನೆಗಳನ್ನು ಮಾಡುತ್ತಾ ಇರುತ್ತಾರೆ; ಅದರಂತೆ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಊಟಮಾಡುತ್ತಾರೆ ೩೪ ಕುಡಿಯುತ್ತಾರೆ ಎಂದು ಹೇಳಲು, ಯೇಸು ಅವರಿಗೆ - ಮದಲಿಂಗನು ಮದುವೆ ಜನರ ಸಂಗಡ ಇರುವಲ್ಲಿ ಅವರಿಗೆ ಉಪವಾಸಮಾಡಿಸುವದಕ್ಕೆ ನಿಮ್ಮಿಂದಾದೀತೇ? ೩೫ ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆಯಲ್ಪಡುವ ಕಾಲ ಬರುತ್ತದೆ. ಆ ಕಾಲದಲ್ಲೆ ಅವರು ಉಪವಾಸಮಾಡುವರು ಎಂದು ಉತ್ತರಕೊಟ್ಟನು. ೩೬ ಅವರಿಗೆ ಒಂದು ಸಾಮ್ಯವನ್ನು* ನೀತಿ ಕಥೆ ಸಹ ಹೇಳಿದನು, ಅದೇನಂದರೆ - ಯಾರೂ ಹೊಸ ವಸ್ತ್ರದಿಂದ ಒಂದು ತುಂಡನ್ನು ತೆಗೆದುಕೊಂಡು ಹಳೇ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ; ಹಚ್ಚಿದರೆ ಆ ಹೊಸದನ್ನು ಹರಿದು ಕೆಡಿಸಿದ ಹಾಗಾಗುವದಲ್ಲದೆ ಹೊಸದರಿಂದ ಹರಿದು ಹಚ್ಚಿದ ತ್ಯಾಪೆಯು ಹಳೆಯ ವಸ್ತ್ರಕ್ಕೆ ಒಪ್ಪುವದೂ ಇಲ್ಲ. ೩೭ ಮತ್ತು ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವದಿಲ್ಲ; ಹಾಗೆ ಇಟ್ಟರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವದಲ್ಲದೆ ಬುದ್ದಲಿಗಳೂ ಒಡೆದು ಹೋಗುವವು. ೩೮ ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು. ೩೯ ಇದಲ್ಲದೆ ಹಳೇ ದ್ರಾಕ್ಷಾರಸವನ್ನು ಕುಡಿದವನು ಹೊಸದು ಬೇಕು ಅನ್ನುವದಿಲ್ಲ; ಹಳೇದೇ ಉತ್ತಮ ಅನ್ನುವನು.

*೫:೩೬ ನೀತಿ ಕಥೆ