ಯೇಸು ಶತಾಧಿಪತಿಯ ಆಳನ್ನು ಸ್ವಸ್ಥಮಾಡಿದ್ದು
(ಮತ್ತಾಯನು 8:5-13)
೧ ಆತನು ತನ್ನ ಮಾತುಗಳನ್ನೆಲ್ಲಾ ಜನರು ಕೇಳುವಂತೆ ಹೇಳಿ ಮುಗಿಸಿದ ಮೇಲೆ ಕಪೆರ್ನೌಮಿಗೆ ಬಂದನು. ೨ ಅಲ್ಲಿ ದಂಡಿನ ಶತಾಧಿಪತಿಗೆ ಇಷ್ಟನಾದ ಒಬ್ಬ ಆಳು ಕ್ಷೇಮವಿಲ್ಲದೆ ಸಾಯುವ ಹಾಗಿದ್ದನು. ೩ ಅವನು ಯೇಸುವಿನ ಸುದ್ಧಿಯನ್ನು ಕೇಳಿ ಆತನ ಬಳಿಗೆ ಬಂದು ನನ್ನ ಆಳನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು. ೪ ಅವರು ಯೇಸುವಿನ ಬಳಿಗೆ ಬಂದು - ನಿನ್ನಿಂದ ಇಂಥ ಉಪಕಾರ ಹೊಂದುವದಕ್ಕೆ ಅವನು ಯೋಗ್ಯನು; ೫ ಅವನು ನಮ್ಮ ಜನರನ್ನು ಪ್ರೀತಿಸಿ ಪ್ರಾರ್ಥನೆಗಾಗಿ ನಮಗೆ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿರುವನು ಎಂದು ಆತನನ್ನು ಬಹಳವಾಗಿ ಬೇಡಿಕೊಳ್ಳಲು ೬ ಯೇಸು ಅವರ ಸಂಗಡ ಹೋದನು. ಆತನು ಇನ್ನೂ ಮನೆಗೆ ಮುಟ್ಟುವುದಕ್ಕೆ ಸ್ವಲ್ಪ ದೂರವಿರುವಾಗಲೇ ಶತಾಥಿಪತಿಯು ಅವನ ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ - ಕರ್ತನೇ, ತೊಂದರೆ ತೆಗೆದುಕೊಳ್ಳಬೇಡ; ನೀವು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ. ೭ ಈ ಕಾರಣದಿಂದ ನಾನು ನನ್ನನ್ನು ನಿಮ್ಮ ಬಳಿಗೆ ಬರುವುದಕ್ಕೆ ತಕ್ಕವನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು. ೮ ನಾನು ಸಹ ಮತ್ತೊಬ್ಬರ ಕೈ ಕೆಳಗಿರುವವನು; ನನ್ನ ಕೈ ಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ಹೋಗು ಎಂದು ಹೇಳಿದರೆ ಅವನು ಹೋಗುತ್ತಾನೆ; ಮತ್ತೊಬ್ಬನಿಗೆ ಬಾ ಎಂದು ಹೇಳಿದರೆ ಅವನು ಬರುತ್ತಾನೆ; ನನ್ನ ಆಳಿಗೆ ಇಂಥಿಂಥದನ್ನು ಮಾಡು ಎಂದು ಹೇಳಿದರೆ ಮಾಡುತ್ತಾನೆ ಎಂಬದಾಗಿ ಹೇಳಿಸಿದನು. ೯ ಯೇಸು ಈ ಮಾತನ್ನು ಕೇಳಿ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿರುವ ಗುಂಪನ್ನು ನೋಡಿ ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು. ೧೦ ತರುವಾಯ ಆ ಶತಾಥಿಪತಿಯ ಕಡೆಯಿಂದ ಬಂದವರು ತಿರಿಗಿ ಮನೆಗೆ ಹೋಗಿ ಆಳು ಆರೋಗ್ಯವಾಗಿರುವದನ್ನು ಕಂಡರು.
ನಾಯಿನೆಂಬ ಊರಿನಲ್ಲಿ ಸತ್ತುಹೋಗಿದ್ದ ಒಬ್ಬ ಯೌನಸ್ಥನನ್ನು ಯೇಸು ಬದುಕಿಸಿದ್ದು
೧೧ ಸ್ವಲ್ಪಕಾಲದ ನಂತರ ಆತನು ನಾಯಿನೆಂಬ ಊರಿಗೆ ಹೋದನು. ಆತನ ಜೊತೆಯಲ್ಲಿ ಆತನ ಶಿಷ್ಯರೂ, ಇನ್ನೂ ಅನೇಕರೂ ಹೋಗುತ್ತಿದ್ದರು. ೧೨ ಆತನು ಊರು ಬಾಗಲಿನ ಹತ್ತಿರಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬನನ್ನು ಹೊರಗೆ ತರುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದನು; ಆಕೆಯು ವಿಧವೆಯಾಗಿದ್ದಳು. ಆಕೆಯ ಸಂಗಡ ಗ್ರಾಮಸ್ಥರು ಅನೇಕರಿದ್ದರು. ೧೩ ಸ್ವಾಮಿಯು ಆಕೆಯನ್ನು ಕಂಡು ಕನಿಕರಿಸಿ - ೧೪ ಅಳಬೇಡ ಎಂದು ಆಕೆಗೆ ಹೇಳಿ ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು - ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ ಅಂದನು. ೧೫ ಅನ್ನುತ್ತಲೇ ಸತ್ತಿದ್ದವನು ಎದ್ದು ಕುಳಿತುಕೊಂಡು ಮಾತನಾಡುವದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದನು. ೧೬ ಎಲ್ಲರು ಭಯಹಿಡಿದವರಾಗಿ - ಮಹಾಪ್ರವಾದಿಯು ನಮ್ಮಲ್ಲಿ ಎದ್ದಿದ್ದಾನೆ, ದೇವರು ತನ್ನ ಜನರನ್ನು ಸಂದರ್ಶಿಸಲು ಬಂದಿದ್ದಾನೆ ಎಂದು ದೇವರನ್ನು ಕೊಂಡಾಡಿದರು. ೧೭ ಈ ವಾರ್ತೆಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲಾ ಪ್ರಾಂತ್ಯದಲ್ಲಿಯೂ ಹಬ್ಬಿತು.
ಸ್ನಾನಿಕನಾದ ಯೋಹಾನನು ಹೇಳಿಕಳುಹಿಸಿದ ಮಾತಿಗೆ ಯೇಸು ಉತ್ತರಕೊಟ್ಟದ್ದು
(ಮತ್ತಾಯನು 11:2-19)
೧೮ ಯೋಹಾನನ ಶಿಷ್ಯರು ನಡೆದ ಸಂಗತಿಗಳನ್ನೆಲ್ಲಾ ಆತನಿಗೆ ತಿಳಿಸಲು ೧೯ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು - ಬರಬೇಕಾದವನು ನೀನೋ ಅಥವಾ ನಾವು ಬೇರೊಬ್ಬನಿಗಾಗಿ ಕಾಯಬೇಕೋ? ಎಂದು ಸ್ವಾಮಿಯನ್ನು ಕೇಳಲು ಹೇಳಿಕಳುಹಿಸಿದನು. ೨೦ ಅವರು ಯೇಸುವಿನ ಬಳಿಗೆ ಬಂದು - ಬರಬೇಕಾದವನು ನೀನೋ ಅಥವಾ ನಾವು ಮತ್ತೊಬ್ಬನ ಬರುವಿಕೆಗಾಗಿ ಕಾಯಬೇಕೋ ಎಂದು ಕೇಳುವುದಕ್ಕಾಗಿ ಸ್ನಾನಿಕನಾದ ಯೋಹಾನನು ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ ಅಂದರು. ೨೧ ಅದೇ ಗಳಿಗೆಯಲ್ಲಿ ಆತನು ಅನೇಕರನ್ನು ರೋಗ, ಉಪದ್ರವ, ದೆವ್ವ ಇಂಥವುಗಳಿಂದ ಪೀಡಿತರಾದವರನ್ನು ವಾಸಿಮಾಡಿದನು; ಮತ್ತು ಅನೇಕ ಕುರುಡರಿಗೆ ಕಣ್ಣಿನ ದೃಷ್ಟಿ ದಯಪಾಲಿಸಿದನು. ೨೨ ಹೀಗಿರಲು ಆತನು ಅವರಿಗೆ ಪ್ರತ್ಯುತ್ತರವಾಗಿ - ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರಿಗೆ ದೃಷ್ಟಿ ಬರುತ್ತವೆ, ಕುಂಟರಿಗೆ ಕಾಲುಬರುತ್ತವೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರಿಗೆ ಕಿವಿಕೇಳುತ್ತವೆ, ಸತ್ತವರು ಜೀವವನ್ನು ಹೊಂದುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದೆ. ೨೩ ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು ಎಂದು ಹೇಳಿದನು.
೨೪ ಯೋಹಾನನ ಶಿಷ್ಯರು ಹಿಂತಿರುಗಿ ಹೋಗಲು ಆತನು ಯೋಹಾನನ ವಿಷಯವಾಗಿ ಆ ಜನರ ಗುಂಪುಗಳಿಗೆ ಹೇಳತೊಡಗಿದ್ದೇನಂದರೆ - ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? ೨೫ ಅಲ್ಲವಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿ ಭೋಗದಲ್ಲಿ ಬಾಳುವವರು ಅರಮನೆಗಳಲ್ಲಿ ಇರುತ್ತಾರಷ್ಟೆ. ೨೬ ಹಾಗಾದರೆ ನೀವು ಏನು ನೋಡಬೇಕೆಂದು ಹೋಗಿದ್ದಿರಿ? ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದ್ದಿರಿ ಎಂದು ನಿಮಗೆ ಹೇಳುತ್ತೇನೆ.
೨೭ ಇಗೋ, ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.
ನೀನು ಹೋಗುವ ದಾರಿಯನ್ನು ಅವನು ನಿನ್ನ ಮುಂದೆ ಸರಾಗಮಾಡುವನು,
ಎಂದು ಯಾರ ವಿಷಯವಾಗಿ ಬರೆದದೆಯೋ ಆ ಪುರುಷನು ಅವನೇ.
೨೮ ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಯೋಹಾನನಿಗಿಂತ ಮಹಾಪುರುಷನು ಒಬ್ಬನೂ ಹುಟ್ಟಿಲ್ಲ; ಅದರೂ ದೇವರ ರಾಜ್ಯದಲ್ಲಿ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಹೇಳುತ್ತೇನೆ. ೨೯ ಇದಲ್ಲದೆ ಜನರೆಲ್ಲರೂ ಸುಂಕದವರೂ ಯೋಹಾನನ ಉಪದೇಶವನ್ನು ಕೇಳಿದಾಗ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಂಡದ್ದರಲ್ಲಿ ದೇವರು ನೀತಿವಂತನೆಂದು ಒಪ್ಪಿಕೊಂಡರು. ೩೦ ಆದರೆ ಫರಿಸಾಯರೂ ಧರ್ಮೋಪದೇಶಕರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ಅವರು ದೇವರ ಸಂಕಲ್ಪವನ್ನು ನಿರಾಕರಿಸಿದರು. ೩೧ ಹೀಗಿರುವಲ್ಲಿ ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ? ೩೨ ಪೇಟೆಯಲ್ಲಿ ಕೂಳಿತುಕೊಂಡು - ನಾವು ನಿಮಗೋಸ್ಕರ ಕೊಳಲೂದಿದೆವು, ನೀವು ಕುಣಿಯಲಿಲ್ಲ; ಗೋಳಾಡಿದೆವು, ನೀವು ಅಳಲಿಲ್ಲ ಎಂದು ಒಬ್ಬರಿಗೊಬ್ಬರು ಕೂಗಿ ಹೇಳುವಂಥ ಮಕ್ಕಳನ್ನು ಹೋಲುತ್ತಾರೆ. ೩೩ ಹೇಗಂದರೆ ಸ್ನಾನಿಕನಾದ ಯೋಹಾನನು ಬಂದಿದ್ದಾನೆ; ಅವನು ರೊಟ್ಟಿ ತಿನ್ನದವನು, ದ್ರಾಕ್ಷಾರಸ ಕುಡಿಯದವನು; ನೀವು - ಅವನಿಗೆ ದೆವ್ವ ಹಿಡಿದದೆ ಅನ್ನುತ್ತೀರಿ. ೩೪ ಮನುಷ್ಯಕುಮಾರನು ಬಂದಿದ್ದಾನೆ, ಆತನು ಅನ್ನ ಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ; ನೀವು - ಇಗೋ, ಈತನು ಹೊಟ್ಟೆಬಾಕನು, ಕುಡುಕನು, ಭ್ರಷ್ಟರ ಮತ್ತು ಪಾಪಿಷ್ಠರ ಗೆಳೆಯನು ಅನ್ನುತ್ತೀರಿ. ೩೫ ಆದರೆ ಜ್ಞಾನವಾದರೋ ತನ್ನ ಎಲ್ಲಾ ಮಕ್ಕಳಿಂದ ಸಮರ್ಥನೆ ಪಡೆದದೆ ಅಂದನು.
ಯೇಸು ಒಬ್ಬ ಫರಿಸಾಯನ ಮನೆಯಲ್ಲಿ ಊಟಮಾಡುವಾಗ ದುರಾಚಾರಿಯಾದ ಒಬ್ಬ ಹೆಂಗಸು ಬಂದು ಆತನ ಪಾದಸೇವೆ ಮಾಡಿದ್ದು
೩೬ ಫರಿಸಾಯರಲ್ಲಿ ಒಬ್ಬನು ಆತನನ್ನು ತನ್ನ ಜೊತೆಯಲ್ಲಿ ಊಟಮಾಡಬೇಕೆಂದು ಬೇಡಿಕೊಂಡಾಗ ಆತನು ಆ ಫರಿಸಾಯನ ಮನೆಗೆ ಹೋಗಿ ಆತನ ಸಂಗಡ ಊಟಕ್ಕೆ ಕುಳಿತುಕೊಂಡನು. ೩೭ ಆಗ ಆ ಊರಿನಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಬಂದಿದ್ದಾನೆಂದು ತಿಳಿದು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ೩೮ ಆತನ ಹಿಂದೆ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ನೆನಸುತ್ತಾ ತನ್ನ ತಲೆ ಕೂದಲಿನಿಂದ ಒರಸಿ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು. ೩೯ ಆದರೆ ಆತನನ್ನು ಊಟಕ್ಕೆ ಕರೆದ ಫರಿಸಾಯನು ಇದನ್ನು ಕಂಡು - ಇವಳು ದುರಾಚಾರಿ; ಈತನು ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳುಕೊಳ್ಳುತ್ತಿದ್ದನು ಅಂದುಕೊಂಡನು. ೪೦ ಅದಕ್ಕೆ ಯೇಸು - ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ಮಾತದೆ ಅಂದಾಗ ಅವನು - ಬೋಧಕನೇ, ಹೇಳು ಅಂದನು. ೪೧ ಆಗ ಯೇಸು - ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು; ಒಬ್ಬನು ಐನೂರು ಹಣ ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಹಣ ಕೊಡಬೇಕಾಗಿತ್ತು ೪೨ ತೀರಿಸುವುದಕ್ಕೆ ಅವರಿಗೆ ಗತಿಯಿಲ್ಲದ್ದರಿಂದ ಆ ಇಬ್ಬರಿಗೂ ಸಾಲವನ್ನು ಮನ್ನಾಮಾಡಿ ಬಿಟ್ಟನು. ಹಾಗಾದರೆ ಅವರಿಬ್ಬರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸುವನು ಎಂದು ಕೇಳಿದ್ದಕ್ಕೆ ೪೩ ಸೀಮೋನನು - ಯಾವನಿಗೆ ಹೆಚ್ಚಾಗಿ ಬಿಟ್ಟನೋ ಅವನೇ ಎಂದು ಭಾವಿಸುತ್ತೇನೆ ಅಂದನು. ಯೇಸು ಅವನಿಗೆ - ನೀನು ಸರಿಯಾಗಿ ತೀರ್ಪುಮಾಡಿದಿ ಎಂದು ಹೇಳಿ ೪೪ ಆ ಹೆಂಗಸಿನ ಕಡೆಗೆ ತಿರುಗಿಕೊಂಡು ಸೀಮೋನನಿಗೆ ಹೇಳಿದ್ದೇನಂದರೆ - ಈ ಹೆಂಗಸನ್ನು ನೋಡಿದ್ದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ನೆನಸಿ ತನ್ನ ತಲೆಯಕೂದಲಿನಿಂದ ಒರಸಿದಳು. ೪೫ ನೀನು ನನಗೆ ಮುದ್ದಿಡಲಿಲ್ಲ; ಇವಳಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಕಾಲಿಗೆ ಮುದ್ದಿಡುವುದನ್ನು ಬಿಟ್ಟಿಲ್ಲ. ೪೬ ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ; ಇವಳಾದರೋ ಸುಗಂಧ ತೈಲವನ್ನು ಕಾಲಿಗೆ ಹಚ್ಚಿದಳು. ೪೭ ಹೀಗಿರಲು ನಾನು ಹೇಳುವ ಮಾತೇನಂದರೆ - ಇವಳ ಪಾಪಗಳು ಬಹಳವಾಗಿದ್ದರೂ ಅವೆಲ್ಲಾವು ಕ್ಷಮಿಸಲ್ಪಟ್ಟವೆ. ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ. ಆದರೆ ಯಾವನಿಗೆ ಸ್ವಲ್ಪ ಮಾತ್ರ ಕ್ಷಮಿಸಲ್ಪಟ್ಟಿದೆಯೋ ಅವನು ತೋರಿಸುವ ಪ್ರೀತಿಯು ಸ್ವಲ್ಪವೇ ಅಂದನು ೪೮ ಆ ಮೇಲೆ ಆತನು ಅವಳಿಗೆ - ನಿನ್ನ ಪಾಪಗಳು ಕ್ಷಮಿಸಲ್ಪಟ್ಟವೆ ಎಂದು ಹೇಳಿದನು. ೪೯ ಆತನ ಸಂಗಡ ಊಟಕ್ಕೆ ಕುಳಿತಿದ್ದವರೆಲ್ಲರೂ, ಪಾಪಗಳನ್ನು ಸಹ ಕ್ಷಮಿಸಲು ಇವನಾರು ಎಂದು ತಮ್ಮ ತಮ್ಮೊಳಗೆ ಅಂದುಕೊಂಡರು. ೫೦ ಆದರೆ ಆತನು ಆ ಹೆಂಗಸಿಗೆ - ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿದೆ; ಸಮಾಧಾನದಿಂದ ಹೋಗು ಎಂದು ಹೇಳಿದನು.