೧೦
ವಿವಾಹ ವಿಚ್ಛೇದನ
(ಮತ್ತಾಯನು 19:1-9; ಲೂಕ 16:18)
೧ ಯೇಸು ಅಲ್ಲಿಂದ ಹೊರಟು ಯೂದಾಯ ಪ್ರಾಂತ್ಯಕ್ಕೂ ಯೊರ್ದನ್ ಹೊಳೆಯ ಆಚೆಯ ಸೀಮೆಗೂ ಬಂದನು. ಅಲ್ಲಿ ಜನರು ತಿರುಗಿ ಗುಂಪುಗುಂಪಾಗಿ ಆತನ ಬಳಿಗೆ ಕೂಡಿ ಬರಲು ಆತನು ತಿರುಗಿ ಎಂದಿನಂತೆ ಅವರಿಗೆ ಉಪದೇಶಮಾಡುತ್ತಿದ್ದನು. ೨ ಆಗ ಫರಿಸಾಯರು ಆತನ ಹತ್ತಿರಕ್ಕೆ ಬಂದು ಆತನನ್ನು ಪರೀಕ್ಷಿಸಬೇಕೆಂಬ ಯೋಚನೆಯಿಂದ, ಒಬ್ಬನು ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮವೋ ಹೇಗೆ ಎಂದು ಕೇಳಿದರು. ೩ ಅದಕ್ಕೆ ಆತನು ಮೋಶೆಯು ನಿಮಗೆ ಏನು ಆಜ್ಞೆ ಕೊಟ್ಟನು? ಎಂದನು. ೪ ಅದಕ್ಕೆ ಅವರು, * ಧರ್ಮೋ. 24:1. ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಅನುಮತಿ ಕೊಟ್ಟನು ಅಂದರು.
೫ ಆದರೆ ಯೇಸು ಅವರಿಗೆ, ಅವನು ನಿಮ್ಮ ಮೊಂಡತನವನ್ನು ನೋಡಿ ನಿಮಗೆ ಇಂಥಾ ಆಜ್ಞೆಯನ್ನು ಬರೆದಿಟ್ಟನು. ೬ ದೇವರಾದರೋ ಸೃಷ್ಟಿಯ ಮೊದಲಿನಿಂದಲೇ ಆದಿ. 1:27:ಮನುಷ್ಯರನ್ನು ಗಂಡುಹೆಣ್ಣಾಗಿ ಉಂಟುಮಾಡಿದನು. ೭  ಆದಿ. 2:24:ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ೮ ಅವರಿಬ್ಬರು ಒಂದೇ ಶರೀರವಾಗಿರುವರು. ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ. ೯ ಆದ್ದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು ಎಂದು ಹೇಳಿದನು.
೧೦ ಅವರು ಮನೆಯಲ್ಲಿದ್ದಾಗ ಆತನ ಶಿಷ್ಯರು ಈ ವಿಷಯವಾಗಿ ಆತನನ್ನು ಪುನಃ ಕೇಳಿದರು. ೧೧ ಅದಕ್ಕೆ ಆತನು, § ಮತ್ತಾಯನು 5:32:ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ವಿರೋಧವಾಗಿ ವ್ಯಭಿಚಾರ ಮಾಡಿದವನಾಗಿದ್ದಾನೆ; ೧೨ ಮತ್ತು ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡಿದವಳಾಗಿದ್ದಾಳೆ ಎಂದು ಹೇಳಿದನು.
ಯೇಸು ಚಿಕ್ಕ ಮಕ್ಕಳನ್ನು ಆಶೀರ್ವದಿಸಿದ್ದು
(ಮತ್ತಾಯನು 19:13-15; ಲೂಕ 18:15-17)
೧೩ ಬಳಿಕ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ಕರತರಲು ಶಿಷ್ಯರು ಅವರನ್ನು ಗದರಿಸಿದರು. ೧೪ ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ, ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ಏಕೆಂದರೆ ದೇವರ ರಾಜ್ಯವು ಇಂಥವರದೇ. ೧೫ ನಿಮಗೆ ಸತ್ಯವಾಗಿ ಹೇಳುತ್ತೇನೆ ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ ಎಂದು ಹೇಳಿದನು. ೧೬ ಆಗ ಆತನು ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.
ಐಶ್ವರ್ಯವಂತನಾದ ಯೌವನಸ್ಥ ಮತ್ತು ಅವನಿಗಿದ್ದ ಹಣದ ಮೋಹ
(ಮತ್ತಾಯನು 19:16-30; ಲೂಕ 18:18-30)
೧೭ ಅಲ್ಲಿಂದ ಯೇಸು ಪ್ರಯಾಣವನ್ನು ಪ್ರಾರಂಭಿಸಿದಾಗ, ದಾರಿಯಲ್ಲಿ ಒಬ್ಬನು ಓಡುತ್ತಾ ಆತನ ಎದುರಿಗೆ ಬಂದು ಮೊಣಕಾಲೂರಿ, ಒಳ್ಳೆಯ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕೆಂದು ಆತನನ್ನು ಕೇಳಿದನು. ೧೮ ಯೇಸು ಅವನಿಗೆ, ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾರೂ ಒಳ್ಳೆಯವರಲ್ಲ. ೧೯  * ವಿಮೋ. 20:12-16:ನರಹತ್ಯಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ ಎಂದು ಹೇಳಿದನು. ೨೦ ಅವನು ಆತನಿಗೆ, ಬೋಧಕನೇ, ನಾನು ಚಿಕ್ಕಂದಿನಿಂದಲೂ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ ಎಂದು ಹೇಳಲು, ೨೧ ಯೇಸು ಅವನನ್ನು ದೃಷ್ಟಿಸಿ ನೋಡಿ ಪ್ರೀತಿಸಿ ಅವನಿಗೆ, ನಿನಗೆ ಒಂದು ಕಡಿಮೆಯಾಗಿದೆ. ಹೋಗು ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು. ೨೨ ಆದರೆ ಅವನು ಬಹಳ ಆಸ್ತಿಯುಳ್ಳವನಾಗಿದ್ದದರಿಂದ ಈ ಮಾತಿಗೆ ವ್ಯಸನಗೊಂಡು ದುಃಖದಿಂದ ಹೊರಟುಹೋದನು. ೨೩ ಆಗ ಯೇಸುವು ಸುತ್ತಲೂ ನೋಡಿ ತನ್ನ ಶಿಷ್ಯರಿಗೆ, ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ತುಂಬಾ ಕಷ್ಟ ಎಂದು ಹೇಳಿದನು. ೨೪ ಶಿಷ್ಯರು ಆತನ ಮಾತುಗಳನ್ನು ಕೇಳಿ ಅಶ್ಚರ್ಯಪಟ್ಟರು. ಆದರೆ ಯೇಸು ಪುನಃ ಅವರಿಗೆ, ಮಕ್ಕಳೇ, ಕೆಲವು ಪ್ರತಿಗಳಲ್ಲಿ, ಧನವನ್ನು ನಂಬಿಕೊಂಡಿರುವವರು ಎಂಬ ಮಾತು ಹೆಚ್ಚಾಗಿ ಸೇರಿಸಿದೆ; ಜ್ಞಾ. 11:28:ದೇವರ ರಾಜ್ಯದಲ್ಲಿ ಸೇರುವುದು ಬಹಳ ಕಷ್ಟ. ೨೫ ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ ಎಂದು ಹೇಳಿದನು. ೨೬ ಈ ಮಾತಿಗೆ ಅವರು ಇನ್ನಷ್ಟು ಆಶ್ಚರ್ಯಪಟ್ಟು, ಹಾಗಾದರೆ ಯಾರಿಗೆ ರಕ್ಷಣೆಯಾದೀತು ಎಂದು ತಮ್ಮತಮ್ಮೊಳಗೆ ಅಂದುಕೊಂಡರು. ೨೭ ಯೇಸು ಅವರನ್ನು ದೃಷ್ಟಿಸಿ ನೋಡಿ ಲೂಕ 1:37; ರೋಮಾ. 4:21:ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ. ದೇವರಿಗೆ ಎಲ್ಲವೂ ಸಾಧ್ಯವೇ ಅಂದನು. ೨೮ ಪೇತ್ರನು ಆತನಿಗೆ, ಇಗೋ ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳುವುದಕ್ಕೆ ಪ್ರಾರಂಭಿಸಿದನು. ೨೯ ಅದಕ್ಕೆ ಯೇಸು, ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ನನ್ನ ನಿಮಿತ್ತವೂ, ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ಬಿಟ್ಟು ಬಿಟ್ಟಿರುವನೋ, ೩೦ ಅವನಿಗೆ ಈ ಕಾಲದಲ್ಲಿಯೇ ಮನೆ, ಸಹೋದರರು, ಸಹೋದರಿಯರು, ತಾಯಿ, ಮಕ್ಕಳು, ಹೊಲಗದ್ದೆಗಳು ಇವೆಲ್ಲವೂ ಹಿಂಸೆಗಳ ಸಹಿತವಾಗಿ ನೂರರಷ್ಟು ಸಿಕ್ಕೇ ಸಿಗುತ್ತವೆ ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು. ೩೧ ಆದರೆ ಬಹು ಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು ಎಂದು ಹೇಳಿದನು.
ಯೇಸು ತನ್ನ ಮರಣ ಪುನರುತ್ಥಾನವನ್ನು ಮೂರನೆಯ ಸಾರಿ ಮುಂದಾಗಿ ತಿಳಿಸಿದ್ದು
(ಮತ್ತಾಯನು 20:17-19; ಲೂಕ 18:31-34)
೩೨ ಅವರು ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿರುವಾಗ ಯೇಸು ಅವರೆಲ್ಲರಿಗಿಂತ ಮುಂದಾಗಿ ನಡೆದುಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಆತನನ್ನು ಹಿಂಬಾಲಿಸುವವರು ಭಯಪಟ್ಟರು. ಆಗ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಪುನಃ ಕರೆದುಕೊಂಡು ಮುಂದೆ ತನಗೆ ಸಂಭವಿಸುವ ಸಂಗತಿಯನ್ನು ಹೇಳುವುದಕ್ಕೆ ಪ್ರಾರಂಭಿಸಿದನು; ೩೩ ಅವರಿಗೆ, ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ ಮತ್ತು ಮನುಷ್ಯಕುಮಾರನನ್ನು ಮುಖ್ಯಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಒಪ್ಪಿಸಿಕೊಡುವರು. ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳ ಕೈಗೆ ಒಪ್ಪಿಸುವರು. ೩೪ ಇವರು ಆತನನ್ನು ಅಪಹಾಸ್ಯ ಮಾಡುವರು, ಆತನ ಮೇಲೆ ಉಗುಳುವರು, ಆತನನ್ನು ಚಾವಟಿಗಳಿಂದ ಹೊಡೆಯುವರು, ಅನಂತರ ಕೊಂದು ಹಾಕುವರು. ಆದರೆ § ಹೋಶೇ. 6:2:ಆತನು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರುವನು ಎಂದು ಹೇಳಿದನು.
ಜೆಬೆದಾಯನ ಮಕ್ಕಳ ಬಿನ್ನಹ
(ಮತ್ತಾಯನು 20:20-28)
೩೫ ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಆತನ ಬಳಿಗೆ ಬಂದು ಆತನಿಗೆ, ಗುರುವೇ, ನಾವು ಬೇಡಿಕೊಳ್ಳುವುದನ್ನು ನಮಗೋಸ್ಕರ ಮಾಡಬೇಕೆಂದು ಹೇಳಿದರು. ೩೬ ಅದಕ್ಕೆ ಆತನು ಅವರಿಗೆ, ನಾನು ನಿಮಗೇನು ಮಾಡಬೇಕೆಂದು ಅಪೇಕ್ಷಿಸುತ್ತೀರಿ? ಎಂದು ಕೇಳಲು, ೩೭ ಅವರು ಆತನಿಗೆ, ನಾವು ಪರಲೋಕದಲ್ಲಿ ಮಹಾಪದವಿಯನ್ನು ಪಡೆದಾಗ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಿಸಬೇಕು ಅಂದರು. ೩೮ ಆದರೆ ಯೇಸು ಅವರಿಗೆ, ನೀವು ಬೇಡಿಕೊಂಡದ್ದು ಏನೆಂದು ನಿಮಗೇ ತಿಳಿಯದು. * ಯೋಹಾ. 18:11:ನಾನು ಕುಡಿಯುವ ಪಾತ್ರೆಯಲ್ಲಿ ಕುಡಿಯುವುದು ನಿಮ್ಮಿಂದಾದೀತೆ? ಲೂಕ. 12:50. ನನಗಾಗುವ ದೀಕ್ಷಾಸ್ನಾನವನ್ನು ಹೊಂದುವುದು ನಿಮ್ಮಿಂದಾದೀತೆ? ಎಂದು ಕೇಳಲು ಅವರು ನಮ್ಮಿಂದಾಗುವುದು ಅಂದರು. ೩೯ ಆಗ ಯೇಸು ಅವರಿಗೆ, ನಾನು ಕುಡಿಯುವ ಪಾತ್ರೆಯಲ್ಲಿ ನೀವು ಕುಡಿಯುವಿರಿ. ನನಗಾಗುವ ದೀಕ್ಷಾಸ್ನಾನವು ನಿಮಗಾಗುವುದು. ೪೦ ಆದರೆ ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಅನುಗ್ರಹಮಾಡುವುದು ನನ್ನದಲ್ಲ; ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವುದು ಎಂದು ಹೇಳಿದನು. ೪೧ ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಯಾಕೋಬ ಯೋಹಾನರ ಮೇಲೆ ಸಿಟ್ಟಿಗೆದ್ದರು. ೪೨ ಯೇಸು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ, ಅನ್ಯಜನಗಳ ಅಧಿಪತಿಗಳು ಎನ್ನಿಸಿಕೊಳ್ಳುವವರು ಅವರ ಮೇಲೆ ದೊರೆತನ ಮಾಡುತ್ತಾರೆ. ಮತ್ತು ಅವರಲ್ಲಿ ಮುಖ್ಯಸ್ಥರು ಅವರ ಮೇಲೆ ಅಧಿಕಾರ ನಡೆಸುತ್ತಾರೆ ಎಂದು ನೀವು ಬಲ್ಲಿರಷ್ಟೆ. ೪೩ ಆದರೆ ನಿಮ್ಮಲ್ಲಿ ಹಾಗಿರಬಾರದು; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಬೇಕು. ೪೪ ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಬೇಕು. ೪೫ ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಸೇವೆಮಾಡುವುದಕ್ಕೂ 1 ತಿಮೊ. 2:6:ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವುದಕ್ಕಾಗಿ ಬಂದನು ಎಂದು ಹೇಳಿದನು.
ಯೇಸು ಹಾಗೂ ಬಾರ್ತಿಮಾಯನೆಂಬ ಕುರುಡ
(ಮತ್ತಾಯನು 20:29-34; ಲೂಕ 18:35-43)
೪೬ ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸುವೂ ತನ್ನ ಶಿಷ್ಯರೂ ಬಹು ಜನರ ಗುಂಪಿನೊಂದಿಗೆ ಆ ಊರಿನಿಂದ ಹೊರಟುಹೋಗುತ್ತಿರುವಾಗ ತಿಮಾಯನ ಮಗನಾದ ಬಾರ್ತಿಮಾಯನು ದಾರಿಯ ಬದಿಯಲ್ಲಿ ಕುಳಿತಿದ್ದನು. ೪೭ ಅವನು ಒಬ್ಬ ಕುರುಡ ಭಿಕ್ಷುಕನಾಗಿದ್ದನು. ಈ ಮಾರ್ಗವಾಗಿ ಹೋಗುತ್ತಿರುವುದು ನಜರೇತಿನ ಯೇಸುವೆಂದು ಅವನು ಕೇಳಿದಾಗ ಅವನು, ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು ಎಂದು ಕೂಗಿಕೊಳ್ಳುವುದಕ್ಕೆ ಪ್ರಾರಂಭಿಸಿದನು. ೪೮ ಅನೇಕರು, ಅವನಿಗೆ ಸುಮ್ಮನಿರು ಎಂದು ಗದರಿಸಲು ಅವನು, ದಾವೀದನ ಕುಮಾರನೇ ನನ್ನನ್ನು ಕರುಣಿಸು ಎಂದು ಮತ್ತಷ್ಟು ಕೂಗಿಕೊಂಡನು. ೪೯ ಆಗ ಯೇಸು ನಿಂತು, ಅವನನ್ನು ಕರೆಯಿರಿ ಅನ್ನಲು ಅವರು ಆ ಕುರುಡನನ್ನು ಕರೆದು, ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಾನೆ ಅಂದರು. ೫೦ ಅವನು ತನ್ನ ಹೊದಿಕೆಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು. ೫೧ ಯೇಸು ಅವನನ್ನು, ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಲು ಆ ಕುರುಡನು, ಗುರುವೇ, ನನಗೆ ಕಣ್ಣಿನ ದೃಷ್ಟಿ ಬರುವಂತೆ ಮಾಡಬೇಕು ಅಂದನು. ೫೨ ಯೇಸು ಅವನಿಗೆ, ಹೋಗು, § ಮಾರ್ಕ. 5:34; ಲೂಕ 7:50; 17:19; ಅ. ಕೃ. 14:9:ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ ಎಂದು ಹೇಳಿದನು. ಕೂಡಲೇ ಅವನಿಗೆ ಕಣ್ಣಿನ ದೃಷ್ಟಿ ಬಂದಿತು. ಅವನು ಆ ದಾರಿಯಲ್ಲಿ ಆತನನ್ನು ಹಿಂಬಾಲಿಸಿದನು.

*೧೦:೪ ಧರ್ಮೋ. 24:1.

೧೦:೬ ಆದಿ. 1:27:

೧೦:೭ ಆದಿ. 2:24:

§೧೦:೧೧ ಮತ್ತಾಯನು 5:32:

*೧೦:೧೯ ವಿಮೋ. 20:12-16:

೧೦:೨೪ ಕೆಲವು ಪ್ರತಿಗಳಲ್ಲಿ, ಧನವನ್ನು ನಂಬಿಕೊಂಡಿರುವವರು ಎಂಬ ಮಾತು ಹೆಚ್ಚಾಗಿ ಸೇರಿಸಿದೆ; ಜ್ಞಾ. 11:28:

೧೦:೨೭ ಲೂಕ 1:37; ರೋಮಾ. 4:21:

§೧೦:೩೪ ಹೋಶೇ. 6:2:

*೧೦:೩೮ ಯೋಹಾ. 18:11:

೧೦:೩೮ ಲೂಕ. 12:50.

೧೦:೪೫ 1 ತಿಮೊ. 2:6:

§೧೦:೫೨ ಮಾರ್ಕ. 5:34; ಲೂಕ 7:50; 17:19; ಅ. ಕೃ. 14:9: