ಶತ್ರುಬಾಧಿತನಾದ ದೈವಭಕ್ತನ ಉದಯಗೀತೆ
ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ ಕೀರ್ತನೆ
 
೧ ಯೆಹೋವನೇ, ನನ್ನ ವಿರೋಧಿಗಳು ಎಷ್ಟೋ ಹೆಚ್ಚಾಗಿದ್ದಾರೆ;
ನನಗೆ ವೈರಿಗಳಾಗಿ ನಿಂತ ಜನರು ಅತ್ಯಧಿಕವಾಗಿದ್ದಾರೆ.
೨ ಅನೇಕರು ನನ್ನ ವಿಷಯದಲ್ಲಿ, “ಅವನಿಗೆ ದೇವರಿಂದ ಸಹಾಯವು ಆಗುವುದೇ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ.
ಸೆಲಾ
೩ ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿಯೂ;
ನೀನು ನನ್ನ ಗೌರವಕ್ಕೆ ಆಧಾರನೂ,
ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ.
೪ ನಾನು ಸ್ವರವೆತ್ತಿ ಯೆಹೋವನಿಗೆ ಮೊರೆಯಿಡುವಾಗ,
ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ.
ಸೆಲಾ
೫ ಯೆಹೋವನು ನನ್ನನ್ನು ಕಾಪಾಡುವವನು,
ಆದುದರಿಂದ ನಾನು ಮಲಗಿಕೊಂಡು ನಿದ್ದೆಮಾಡಿ ಸುಖವಾಗಿ ಎಚ್ಚರಗೊಂಡೆನು.
೬ ನನ್ನ ಸುತ್ತಲು ಸನ್ನದ್ಧರಾಗಿ ನಿಂತಿರುವ
ಸಾವಿರಾರು ವೈರಿಗಳಿಗಾದರೂ ನಾನು ಹೆದರೆನು.
೭ ಯೆಹೋವನೇ, ನನ್ನ ದೇವರೇ,
ನನ್ನ ಎಲ್ಲಾ ಶತ್ರುಗಳ ದವಡೆಯನ್ನು ಬಡಿದು ಅವರ ಹಲ್ಲುಗಳನ್ನು ಉದುರಿಸಿಬಿಟ್ಟವನೇ,
ಎದ್ದು ಬಂದು ನನ್ನನ್ನು ರಕ್ಷಿಸು.
೮ ರಕ್ಷಣೆಯು ಯೆಹೋವನಿಂದಲೇ ಉಂಟಾಗುವುದು.
ಯೆಹೋವನೇ, ನಿನ್ನ ಆಶೀರ್ವಾದವು ನಿನ್ನ ಜನರ ಮೇಲೆ ಇರಲಿ.
ಸೆಲಾ.