ಯೆಹೋವನ ಸನ್ನಿಧಿಗೆ ಬರಲು ಯೋಗ್ಯರಾದವರು
೧೫
ದಾವೀದನ ಕೀರ್ತನೆ.
 
೧ ಯೆಹೋವನೇ, ನಿನ್ನ ಗುಡಾರದಲ್ಲಿ ಇಳಿದುಕೊಂಡಿರುವುದಕ್ಕೆ ಯಾರು ಯೋಗ್ಯರು?
ನಿನ್ನ ಪರಿಶುದ್ಧಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?
೨ ಅವನು ಸಜ್ಜನನೂ, ನೀತಿವಂತನೂ,
ಮನಃಪೂರ್ವಕವಾಗಿ ಸತ್ಯದ ಮಾತುಗಳನ್ನಾಡುವವನೂ ಆಗಿರಬೇಕು.
೩ ಅವನು ಚಾಡಿಯನ್ನು ಹೇಳದವನೂ,
ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ,
ಯಾರನ್ನೂ ನಿಂದಿಸದವನೂ ಆಗಿರಬೇಕು.
೪ ಅವನು ಭ್ರಷ್ಟರನ್ನು ಬಿಟ್ಟುಬಿಟ್ಟವನೂ,
ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವನೂ,
ನಷ್ಟವಾದರೂ ಪ್ರಮಾಣತಪ್ಪದವನೂ ಆಗಿರಬೇಕು.
೫ ಅವನು ಸಾಲಕ್ಕೆ ಬಡ್ಡಿ ಕೇಳದವನೂ,
ನಿರಪರಾಧಿಯ ಕೇಡಿಗಾಗಿ ಲಂಚವನ್ನು ತೆಗೆದುಕೊಳ್ಳದವನೂ ಆಗಿರಬೇಕು.
ಇಂಥವನು ಎಂದಿಗೂ ಕದಲುವುದಿಲ್ಲ.