ದುಷ್ಟನಾಸ್ತಿಕರಿಂದ ತಪ್ಪಿಸಿ ಕಾಪಾಡಬೇಕೆಂದು ಪ್ರಾರ್ಥಿಸುವುದು
೫೩
ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು; ದಾವೀದನ ಪದ್ಯ.
 
೧ ದುರ್ಮತಿಗಳು, “ದೇವರಿಲ್ಲ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ;
ಅವರು ಕೆಟ್ಟವರು; ಅಸಹ್ಯವಾದ ಅಕ್ರಮಗಳನ್ನು ನಡೆಸುತ್ತಾರೆ;
ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.
೨ ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ ಎಂದು
ದೇವರು ಆಕಾಶದಿಂದ ಮನುಷ್ಯರನ್ನು ನೋಡಲಾಗಿ,
೩ ಒಳ್ಳೆಯದನ್ನು ನಡೆಸುವವರು ಒಬ್ಬರೂ ಇಲ್ಲ;
ಅವರೆಲ್ಲರೂ ದ್ರೋಹಿಗಳಾಗಿ ಕೆಟ್ಟುಹೋದವರೇ.
೪ ದುಷ್ಟತ್ವವನ್ನು ನಡೆಸುವವರು ಯಾರೆಂದು ತಿಳಿಯುವುದಿಲ್ಲವೋ?
ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ;
ದೇವರನ್ನು ಸ್ಮರಿಸುವುದಿಲ್ಲ.
೫ ಭಯಪಡುವುದಕ್ಕೆ ಕಾರಣವಿಲ್ಲದಿದ್ದರೂ,
ಅವರು ಪಕ್ಕನೆ ಭಯಭ್ರಾಂತರಾದರು;
ನಿಮಗೆ ಮುತ್ತಿಗೆಹಾಕಿದವರನ್ನು ದೇವರು ಸಂಹರಿಸಿ
ಅವರ ಎಲುಬುಗಳನ್ನು ಚದರಿಸಿಬಿಟ್ಟನಲ್ಲಾ.
ದೇವರು ಅವರನ್ನು ಕೈಬಿಟ್ಟದ್ದರಿಂದ ಅವರು ನಾಚಿಕೆಗೆ ಒಳಗಾಗುವರು.
೬ ಚೀಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ.
ದೇವರು ತನ್ನ ಭಾಗ್ಯವನ್ನು ಜನರಿಗೆ ಹಿಂದಿರುಗಿಸುವಾಗ,
ಆತನ ಪ್ರಜೆಗಳಾಗಿರುವ ಯಾಕೋಬ ವಂಶದವರು ಉಲ್ಲಾಸಗೊಳ್ಳುವರು;
ಇಸ್ರಾಯೇಲರು ಹರ್ಷಿಸುವರು.