ಅನ್ಯಾಯಾಧಿಕಾರಿಗಳಿಗೆ ಪ್ರತಿದಂಡನೆಯಾಗಬೇಕೆಂದು ಪ್ರಾರ್ಥನೆ
೫೮
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ದಾವೀದನ ಕಾವ್ಯ.
 
೧ ಅಧಿಕಾರಿಗಳೇ, ನೀವು ಕೊಡುವ ತೀರ್ಪುಗಳು ನೀತಿಗನುಸಾರವಾಗಿವೆಯೋ?
ಜನರ ವ್ಯಾಜ್ಯಗಳನ್ನು ನ್ಯಾಯಯುತವಾಗಿ ಬಗೆಹರಿಸುತ್ತಿರೋ?
೨ ನಿಮ್ಮ ಮನಸ್ಸಿನ ಕಲ್ಪನೆಯೆಲ್ಲಾ ಕೆಟ್ಟತನವೇ;
ನೀವು ದೇಶದವರಿಗೆ ಅನ್ಯಾಯವನ್ನೇ ತೂಗಿಕೊಡುವವರಾಗಿದ್ದೀರಲ್ಲಾ.
೩ ದುಷ್ಟರು ಜನ್ಮದಿಂದಲೇ ಧರ್ಮಭ್ರಷ್ಟರು;
ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿ ದಾರಿ ತಪ್ಪಿದವರು.
೪ ಅವರು ಸರ್ಪದಂತೆ ವಿಷಭರಿತರು.
೫ ಜಾಣತನದಿಂದ ಮಂತ್ರಿಸುವ ಹಾವಾಡಿಗರ ನಾಗಸ್ವರಕ್ಕೂ ಮರುಳಾಗದ
ಅಥವಾ ಅದಕ್ಕೆ ಕಿವಿಗೊಡದ ಕಳ್ಳ ಹಾವಿನಂತೆ ಇರುತ್ತಾರೆ.
೬ ದೇವರೇ, ಅವರ ಹಲ್ಲುಗಳನ್ನು ಮುರಿದುಬಿಡು;
ಯೆಹೋವನೇ, ಪ್ರಾಯದ ಸಿಂಹಗಳ ಕೋರೇಹಲ್ಲುಗಳನ್ನು ಕಿತ್ತುಹಾಕು.
೭ ಕ್ಷಣದಲ್ಲಿ ಹರಿದು ಕಾಣದೆ ಹೋಗುವ ನೀರಿನಂತೆ ಅವರು ಮಾಯವಾಗಲಿ;
ಬಾಣ ತಾಗಿತೋ ಎಂಬಂತೆ ಅವರು ಬೀಳಲಿ.
೮ ಒಣಗಿ ಸತ್ತ ಬಸವನಹುಳದಂತೆ ನಿರ್ನಾಮವಾಗಲಿ;
ಗರ್ಭವಿಳಿದ ಪಿಂಡದಂತೆ ಸೂರ್ಯನನ್ನು ನೋಡದೆ ಹೋಗಲಿ.
೯ ಇನ್ನೂ ಹಸಿರಿರುರುವಾಗಲೇ ಒಲೆಗೆ ಹಾಕಿದ ಮುಳ್ಳಿನ ಕೊಂಪೆಯನ್ನು ಬಿರುಗಾಳಿಯು ಹಾರಿಸಿಬಿಡುವಂತೆ
ದೇವರ ಉಗ್ರಕೋಪವು ಅವರನ್ನು ನಿಶ್ಶೇಷಮಾಡಲಿ.
೧೦ ದುಷ್ಟರಿಗಾಗುವ ಪ್ರತಿದಂಡನೆಯನ್ನು ಭಕ್ತರು ನೋಡಿ ಹರ್ಷಿಸಿ,
ಅವರ ರಕ್ತದಲ್ಲಿ ಕಾಲಾಡಿಸುವರು.
೧೧ ನೀತಿವಂತನಿಗೆ ಫಲವುಂಟೆಂತಲೂ,
ಲೋಕದಲ್ಲಿ ನ್ಯಾಯಸ್ಥಾಪಕನಾದ ದೇವರು ಇದ್ದಾನೆಂತಲೂ ಸರ್ವರು ಒಪ್ಪಿಕೊಳ್ಳುವರು.