ನ್ಯಾಯಾಧೀಶನಾದ ದೇವರಿಗೆ ಸ್ತುತಿ
೭೫
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ಕೀರ್ತನೆ; ಹಾಡು; ಆಸಾಫನದು.
(ಕೀರ್ತ. 57)
 
೧ ದೇವರೇ, ಕೊಂಡಾಡುತ್ತೇವೆ;
ನಿನ್ನನ್ನು ಕೊಂಡಾಡುತ್ತೇವೆ. ನಿನ್ನ ನಾಮ ಮಹತ್ವವವನ್ನು ನೆನಪುಮಾಡಿಕೊಂಡು;
ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುತ್ತೇವೆ.
೨ ದೇವರು ನುಡಿದದ್ದು, “ನಿಯಮಿತ ಕಾಲವು ಬಂದಾಗ,
ನಾನೇ ನೀತಿಯಿಂದ ತೀರ್ಪುಕೊಡುವೆನು.
೩ ಎಲ್ಲಾ ನಿವಾಸಿಗಳೊಡನೆ ಭೂಮಿಯು ಕರಗಿ ಹೋದರೂ,
ಅದರ ಸ್ತಂಭಗಳನ್ನು ಸ್ಥಾಪಿಸುವವನು ನಾನೇ” ಎಂಬುದು.
ಸೆಲಾ
೪ ನಾನು ಹೆಮ್ಮೆಗಾರರಿಗೆ, “ಕೊಚ್ಚಿಕೊಳ್ಳಬೇಡಿರಿ” ಎಂದು;
ದುಷ್ಟರಿಗೆ, “ನಿಮ್ಮ ಕೊಂಬುಗಳನ್ನು ಮೇಲೆತ್ತಬೇಡಿರಿ;
೫ ಕೊಂಬುಗಳನ್ನು ಮೇಲೆತ್ತಬೇಡಿರಿ;
ಸೊಕ್ಕಿನಿಂದ ಮಾತನಾಡಬೇಡಿರಿ” ಎಂದು ಹೇಳುವೆನು.
೬ ಏಕೆಂದರೆ ಉದ್ಧಾರವು ಪೂರ್ವದಿಂದಾಗಲಿ, ಪಶ್ಚಿಮದಿಂದಾಗಲಿ,
ಅರಣ್ಯದಿಂದಾಗಲಿ ಬರುವುದಿಲ್ಲ.
೭ ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು,
ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ.
೮ ಯೆಹೋವನ ಕೈಯಲ್ಲಿ ಪಾತ್ರೆ ಇದೆ;
ಅದು ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿದೆ.
ಅದರಿಂದ ಹೊಯ್ದು ಹಂಚುತ್ತಾನೆ.
ಲೋಕದ ದುಷ್ಟರೆಲ್ಲರೂ ಅದರೊಳಗಿನ ಮಡ್ಡಿಯನ್ನು ಸಹ ಕುಡಿದು ಮುಗಿಸಬೇಕು.
೯ ನಾನಾದರೋ ಸದಾ ವರ್ಣಿಸುವವನಾಗಿ,
ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುತ್ತಾ ವರ್ಣಿಸಿ ಹಾಡುವೆನು.
೧೦ ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವೆನು;
ಆದರೆ ನೀತಿವಂತರ ಕೊಂಬುಗಳನ್ನು ಉನ್ನತಮಟ್ಟಕ್ಕೆ ಎತ್ತಲ್ಪಡುವವು.