ಇಸ್ರಾಯೇಲರ ಉಪದೇಶಯುಕ್ತವಾದ ಪೂರ್ವಚರಿತ್ರೆ
೭೮
ಆಸಾಫನ ಪದ್ಯ.
(ಕೀರ್ತ. 105; 106; ಧರ್ಮೋ. 32)
 
೧ ನನ್ನ ಜನರೇ, ನನ್ನ ಉಪದೇಶವನ್ನು ಕೇಳಿರಿ;
ನನ್ನ ನುಡಿಗಳನ್ನು ಕಿವಿಗೊಟ್ಟು ಲಾಲಿಸಿರಿ.
೨ ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು.
ಪೂರ್ವಕಾಲದ ಗೂಢಾರ್ಥಗಳನ್ನು ಬಹಿರಂಗ ಪಡಿಸುವೆನು.
೩ ನಾವು ನಮ್ಮ ಹಿರಿಯರ ಬಾಯಿಂದ ತಿಳಿದ ಸಂಗತಿಗಳನ್ನು,
ಅವರ ಸಂತಾನದವರಿಗೆ ಮರೆಮಾಡದೆ,
೪ ಯೆಹೋವನ ಘನತೆಯನ್ನು, ಆತನ ಪರಾಕ್ರಮವನ್ನು,
ಅದ್ಭುತಕೃತ್ಯಗಳನ್ನು ಮುಂದಣ ಸಂತತಿಯವರಿಗೆ ವಿವರಿಸುವೆವು.
೫ ಆತನು ಯಾಕೋಬವಂಶದಲ್ಲಿ ತನ್ನ ಕಟ್ಟಳೆಯನ್ನಿಟ್ಟು,
ಇಸ್ರಾಯೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟು,
ನಮ್ಮ ಹಿರಿಯರಿಗೆ ಆಜ್ಞಾಪಿಸಿದ್ದೇನೆಂದರೆ, “ಇವುಗಳನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿರಿ;
೬ ಇದರಿಂದ ಅವು ಅವರ ಮುಂದಿನ ಪೀಳಿಗೆಗೆ ಗೊತ್ತಾಗಿ,
ಅವರ ಮಕ್ಕಳು ಅವುಗಳನ್ನು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತಿಳಿಸುತ್ತಾ ಹೋಗುವರು.
೭ ಆಗ ಅವರು ಮೊಂಡರೂ, ಅವಿಧೇಯರೂ, ಚಪಲಚಿತ್ತರೂ,
ದೇವದ್ರೋಹಿಗಳೂ ಆದ ತಮ್ಮ ಪೂರ್ವಿಕರಂತೆ ಆಗದೆ,
೮ ನನ್ನ ಮಹತ್ಕೃತ್ಯಗಳನ್ನು ಮರೆಯದೆ, ನನ್ನಲ್ಲಿಯೇ ಭರವಸೆಯಿಟ್ಟು,
ನನ್ನ ಆಜ್ಞೆಗಳನ್ನು ಕೈಗೊಳ್ಳುವರು” ಎಂಬುದೇ.
೯ ಎಫ್ರಾಯೀಮ್ ಕುಲದವರು ಬಿಲ್ಲುಗಳಿಂದ ಸಿದ್ಧರಾಗಿ,
ಯುದ್ಧಸಮಯದಲ್ಲಿ ಹಿಂದಿರುಗಿ ಓಡಿಹೋದರು.
೧೦ ಅವರು ದೇವರ ನಿಬಂಧನೆಯನ್ನು ಪಾಲಿಸಲಿಲ್ಲ,
ಆತನ ಧರ್ಮಶಾಸ್ತ್ರವನ್ನು ಅನುಸರಿಸಲು ಮನಸ್ಸು ಮಾಡಲಿಲ್ಲ.
೧೧ ಆತನ ಕಾರ್ಯಗಳನ್ನು, ಆತನು ತಮ್ಮೆದುರಿನಲ್ಲಿ ನಡೆಸಿದ
ಅದ್ಭುತಗಳನ್ನು ಮರೆತುಬಿಟ್ಟರು.
೧೨ ಆತನು ಐಗುಪ್ತದೇಶದ ಸೋನ್ ಸೀಮೆಯಲ್ಲಿ,
ಅವರ ಪೂರ್ವಿಕರ ಸಮಕ್ಷದಲ್ಲಿಯೇ ಆಶ್ಚರ್ಯಕ್ರೀಯೆಗಳನ್ನು ನಡೆಸಿದನು.
೧೩ ಆತನು ಸಮುದ್ರವನ್ನು ವಿಭಾಗಿಸಿ,
ಅದರ ನೀರನ್ನು ರಾಶಿಯಾಗಿ ನಿಲ್ಲುವಂತೆ ಮಾಡಿ, ಅವರನ್ನು ದಾಟಿಸಿದನು.
೧೪ ಹಗಲಿನಲ್ಲಿ ಮೋಡದಿಂದಲೂ, ರಾತ್ರಿಯಲ್ಲಿ ಬೆಂಕಿಯ ಬೆಳಕಿನಿಂದಲೂ,
ಆತನು ಅವರನ್ನು ಕರೆದೊಯ್ದನು.
೧೫ ಆತನು ಅರಣ್ಯದಲ್ಲಿ ಬಂಡೆಗಳನ್ನು ಸೀಳಿ,
ಅವರಿಗೆ ಸಾಗರದಿಂದಲೋ ಎಂಬಂತೆ ಧಾರಾಳವಾಗಿ ನೀರು ಕುಡಿಸಿದನು.
೧೬ ಗಿರಿಶಿಲೆಯಿಂದ ಜಲಪ್ರವಾಹಗಳನ್ನು ಹೊರಡಿಸಿ,
ನದಿಗಳಾಗಿ ಹರಿಯಮಾಡಿದನು.
೧೭ ಆದರೂ ಅವರು ನಿರ್ಜಲಪ್ರದೇಶದಲ್ಲಿ ಪರಾತ್ಪರನಿಗೆ ಪದೇಪದೇ ಅವಿಧೇಯರಾಗಿ,
ಇನ್ನೂ ಹೆಚ್ಚು ಪಾಪಮಾಡುತ್ತಾ ಬಂದರು.
೧೮ ಅವರು ಇಷ್ಟಭೋಜನವನ್ನು ಕೇಳಿಕೊಳ್ಳುವಾಗ,
ಸಂಶಯ ಮನಸ್ಸಿನಿಂದ ದೇವರನ್ನು ಪರೀಕ್ಷಿಸಿದರು.
೧೯ ಅವರು ಆತನಿಗೆ ವಿರುದ್ಧವಾಗಿ ಹೇಳಿದ್ದೇನೆಂದರೆ,
“ದೇವರು ಅರಣ್ಯದಲ್ಲಿ ಊಟಕ್ಕೆ ಬಡಿಸಬಲ್ಲನೋ?
೨೦ ಬಂಡೆಯನ್ನು ಹೊಡೆದು, ನೀರು ಚಿಮ್ಮಿ ಹೊರಗೆ ಬರುವಂತೆಯೂ,
ಪ್ರವಾಹವು ದಡಮೀರಿ ಹರಿಯುವಂತೆಯೂ ಮಾಡಿದನಲ್ಲವೋ?
ಆತನು ರೊಟ್ಟಿಯನ್ನು ಕೊಡಲು ಶಕ್ತನೋ?
ತನ್ನ ಜನರಿಗೆ ಮಾಂಸವನ್ನೂ ಒದಗಿಸುವನೋ” ಎಂಬುದೇ.
೨೧ ಯೆಹೋವನು ಇದನ್ನು ಕೇಳಿ ರೋಷಗೊಂಡನು.
ಅವರು ದೇವರಲ್ಲಿ ಭರವಸವಿಡದೆಯೂ,
ಆತನ ರಕ್ಷಣೆಯನ್ನು ನಂಬದೆ ಹೋದುದರಿಂದಲೂ,
೨೨ ಆತನಿಗೆ ಇಸ್ರಾಯೇಲರ ಮೇಲೆ ಕೋಪವುಂಟಾಯಿತು;
ಯಾಕೋಬ್ ವಂಶದವರಲ್ಲಿ ಬೆಂಕಿ ಹತ್ತಿತ್ತು.
೨೩ ಆತನು ಮೇಘಗಳಿಗೆ ಅಪ್ಪಣೆಕೊಟ್ಟು ಆಕಾಶದ್ವಾರಗಳನ್ನು ತೆರೆದು,
೨೪ ಸ್ವರ್ಗಧಾನ್ಯವಾದ ಮನ್ನವನ್ನು ಅವರಿಗೋಸ್ಕರ ಸುರಿಸಿ,
ಉಣ್ಣಲಿಕ್ಕೆ ಕೊಟ್ಟನು.
೨೫ ಅವರಲ್ಲಿ ಪ್ರತಿಯೊಬ್ಬನು ದೇವದೂತರ ಆಹಾರವನ್ನು ಸೇವಿಸಿದನು.
ಆತನು ಅವರಿಗೆ ಭೋಜನವನ್ನು ಸಂತೃಪ್ತಿಯಾಗಿ ಅನುಗ್ರಹಿಸಿದನು.
೨೬ ಆತನು ಗಗನಮಂಡಲದಲ್ಲಿ ಮೂಡಣ ಗಾಳಿಯನ್ನು ಉಂಟುಮಾಡಿ,
ಪ್ರತಾಪದಿಂದ ತೆಂಕಣ ಗಾಳಿಯನ್ನೂ ಹೊಡೆದುಕೊಂಡು ಬಂದು,
೨೭ ಧೂಳಿನಷ್ಟು ಮಾಂಸವೃಷ್ಟಿಯನ್ನು ಸುರಿಸಿದನು;
ಸಮುದ್ರದ ಮರಳಿನಷ್ಟು ಪಕ್ಷಿಗಳು ಅವರಿದ್ದಲ್ಲಿ ಬೀಳುವಂತೆ ಮಾಡಿದನು.
೨೮ ಅವು ಪಾಳೆಯದ ಮಧ್ಯದಲ್ಲಿಯೇ ಅವರ ಬಿಡಾರಗಳ ಸುತ್ತಲೂ ಬಿದ್ದವು.
೨೯ ಅವರು ತಿಂದು ಸಂತೃಪ್ತರಾದರು;
ಆತನು ಅವರಿಗೆ ಬಯಸಿದ್ದನ್ನು ಕೊಟ್ಟನು.
೩೦ ಅವರ ಇಷ್ಟಭೋಜನವು ಅವರಿಗೆ ಅಸಹ್ಯವಾಗುವುದಕ್ಕಿಂತ ಮೊದಲು,
ಅವರು ಅದನ್ನು ಇನ್ನೂ ಸೇವಿಸುತ್ತಿರುವಾಗಲೇ,
೩೧ ದೇವರ ಕೋಪವು ಅವರಿಗೆ ವಿರುದ್ಧವಾಗಿ ಎದ್ದು,
ಅವರಲ್ಲಿ ಕೊಬ್ಬಿದವರನ್ನು ವಧಿಸಿ,
ಇಸ್ರಾಯೇಲರ ಪ್ರಾಯಸ್ಥರನ್ನು ನೆಲಕ್ಕುರುಳಿಸಿತು.
೩೨ ಇಷ್ಟಾದರೂ ಪುನಃ ಪುನಃ ಪಾಪಮಾಡುತ್ತಾ ಬಂದರು;
ಅವರು ಆತನ ಅದ್ಭುತಕೃತ್ಯಗಳನ್ನು ನಂಬದೆ ಹೋದರು.
೩೩ ಆದುದರಿಂದ ಆತನು ಅವರ ಜೀವಿತ ದಿನಗಳನ್ನು ಉಸಿರಿನಂತೆಯೂ,
ಅವರ ವರುಷಗಳನ್ನು ಭಯದಿಂದಲೂ ಮುಗಿಸಿದನು.
೩೪ ಸಂಹಾರವಾಗುವಾಗೆಲ್ಲಾ ಅವರು ದೇವರನ್ನು ನೆನಸಿ,
ಪುನಃ ಆತನ ಪ್ರಸನ್ನತೆಯನ್ನು ಬಯಸಿ,
೩೫ ದೇವರು ತಮ್ಮ ಬಂಡೆಯು, ಪರಾತ್ಪರನು,
ತಮ್ಮ ವಿಮೋಚಕನು ಆಗಿದ್ದಾನೆ ಎಂಬುದನ್ನು ನೆನಪಿಗೆ ತಂದುಕೊಳ್ಳುವರು.
೩೬ ಆದರೆ ಅವರು ಆತನನ್ನು ತಮ್ಮ ಬಾಯಿಂದ ವಂಚಿಸಿ,
ತಮ್ಮ ನಾಲಿಗೆಯಿಂದ ಸುಳ್ಳಾಡಿದರು.
೩೭ ಅವರ ಹೃದಯವು ಆತನಲ್ಲಿ ನೆಲೆಗೊಳ್ಳಲಿಲ್ಲ;
ಅವರು ಆತನ ನಿಬಂಧನೆಯನ್ನು ನಿಷ್ಠೆಯಿಂದ ಕೈಗೊಳ್ಳಲಿಲ್ಲ.
೩೮ ಆದರೂ ಆತನು ಕರುಣಾಳುವೂ,
ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ,
ತನ್ನ ಸಿಟ್ಟನ್ನೆಲ್ಲಾ ಏರಗೊಡಿಸದೆ, ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.
೩೯ ಅವರು ಮಾಂಸಮಾತ್ರದವರೂ,
ಶ್ವಾಸವನ್ನು ತಿರುಗಿ ಪಡೆಯದವರಾಗಿದ್ದಾರೆ ಎಂಬುದನ್ನು ನೆನಪುಮಾಡಿಕೊಳ್ಳುತ್ತಿದ್ದನು.
೪೦ ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ,
ಅಲ್ಲಿ ಆತನನ್ನು ನೋಯಿಸಿದರು.
೪೧ ಆತನನ್ನು ಪದೇಪದೇ ಪರೀಕ್ಷಿಸಿ,
ಇಸ್ರಾಯೇಲರ ಪರಿಶುದ್ಧ ದೇವರನ್ನು ಕೋಪಕ್ಕೆ ಗುರಿಮಾಡಿದರು.
೪೨ ಅವರು ಆತನ ಭುಜಬಲವನ್ನೂ,
ತಮ್ಮನ್ನು ಶತ್ರುಗಳಿಂದ ಬಿಡಿಸಿದ ಸಮಯವನ್ನೂ,
೪೩ ಆತನು ಐಗುಪ್ತದಲ್ಲಿ ಮಾಡಿದ ಮಹತ್ಕಾರ್ಯಗಳನ್ನು,
ಸೋನ್ ಸೀಮೆಯಲ್ಲಿ ನಡೆಸಿದ ಅದ್ಭುತಗಳನ್ನೂ ಮರೆತುಬಿಟ್ಟರು.
೪೪ ಅವರು ಹಳ್ಳದ ನೀರನ್ನು ಕುಡಿಯಲಾಗದಂತೆ,
ಆತನು ಅಲ್ಲಿನ ನದಿಗಳನ್ನು ರಕ್ತವನ್ನಾಗಿ ಮಾರ್ಪಡಿಸಿದನು.
೪೫ ಅವರನ್ನು ನಾಶಮಾಡುವ ವಿಷದ ಹುಳಗಳನ್ನು,
ಹಾಳುಮಾಡುವ ಕಪ್ಪೆಗಳನ್ನು ಕಳುಹಿಸಿಕೊಟ್ಟನು.
೪೬ ಅವರ ಬೆಳೆಗಳನ್ನು ಜಿಟ್ಟೆಹುಳಗಳಿಗೂ,
ಕಷ್ಟಫಲವನ್ನು ಮಿಡತೆಗಳಿಗೂ ಕೊಟ್ಟುಬಿಟ್ಟನು.
೪೭ ಅವರ ದ್ರಾಕ್ಷಾಲತೆಗಳನ್ನು ಆನೆಕಲ್ಲಿನಿಂದಲೂ,
ಅತ್ತಿಮರಗಳನ್ನು ಕಲ್ಮಳೆಯಿಂದಲೂ ಹಾಳುಮಾಡಿದನು.
೪೮ ಅವರ ದನಗಳನ್ನು ಕಲ್ಮಳೆಗೂ,
ಕುರಿಹಿಂಡುಗಳನ್ನು ಸಿಡಿಲಿಗೂ ಒಪ್ಪಿಸಿದನು.
೪೯ ಆತನು ಅವರ ಮೇಲೆ ತನ್ನ ಕೋಪರೌದ್ರಗಳನ್ನು,
ಉಗ್ರಹಿಂಸೆಗಳನ್ನು ಸಂಹಾರಕ ದೂತಗಣವನ್ನೋ ಎಂಬಂತೆ ಕಳುಹಿಸಿದನು.
೫೦ ತನ್ನ ರೌದ್ರಕ್ಕೆ ಎಡೆಗೊಟ್ಟು ಅವರನ್ನು ಬದುಕಗೊಡಿಸದೆ,
ಅವರ ಜೀವವನ್ನು ಮರಣವ್ಯಾಧಿಗೆ ಆಹುತಿಕೊಟ್ಟನು.
೫೧ ಹಾಮನ ವಂಶದವರ ಪ್ರಥಮಫಲವಾಗಿರುವ
ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದನು.
೫೨ ಆತನು ಕುರಿಗಳನ್ನೋ ಎಂಬಂತೆ ತನ್ನ ಜನವನ್ನು ಹೊರತಂದು,
ಅಡವಿಯಲ್ಲಿ ಹಿಂಡನ್ನು ಪೋಷಿಸಿ ನಡೆಸಿದನು.
೫೩ ಆತನು ಸುರಕ್ಷಿತವಾಗಿ ನಡೆಸಿದ್ದರಿಂದ ಅವರು ಭಯಪಡಲಿಲ್ಲ;
ಅವರ ಶತ್ರುಗಳನ್ನು ಸಮುದ್ರವು ಮುಚ್ಚಿಬಿಟ್ಟಿತು;
೫೪ ಅವರನ್ನು ತನ್ನ ಪವಿತ್ರದೇಶಕ್ಕೆ ಅಂದರೆ
ತನ್ನ ಭುಜಬಲದಿಂದ ಸಂಪಾದಿಸಿದ ಈ ಪರ್ವತಸೀಮೆಗೆ ಕರೆದುಕೊಂಡು ಬಂದನು.
೫೫ ಜನಾಂಗಗಳನ್ನು ಅವರ ಮುಂದಿನಿಂದ ಓಡಿಸಿಬಿಟ್ಟು,
ಅವರ ದೇಶವನ್ನು ಇಸ್ರಾಯೇಲ್ ಗೋತ್ರಗಳಿಗೆ ಸ್ವಾಸ್ತ್ಯವಾಗಿರುವಂತೆ ಹಂಚಿಕೊಟ್ಟು,
ಆ ಜನಾಂಗಗಳ ಬಿಡಾರಗಳಲ್ಲಿ ಅವರನ್ನು ನೆಲೆಗೊಳಿಸಿದನು.
೫೬ ಆದರೂ ಅವರು ಪರಾತ್ಪರನಾದ ದೇವರನ್ನು ಪರೀಕ್ಷಿಸಿ ಅವಿಧೇಯರಾದರು.
ಆತನ ವಿಧಿಗಳನ್ನು ಕೈಗೊಳ್ಳದೆ,
೫೭ ಆತನಿಗೆ ವಿಮುಖರಾಗಿ ತಮ್ಮ ಹಿರಿಯರಂತೆ ದ್ರೋಹಿಗಳಾದರು.
ಮೋಸದ ಬಿಲ್ಲಿನಂತೆ ತಿರುಗಿಕೊಂಡರು.
೫೮ ಅವರು ತಮ್ಮ ಪೂಜಾಸ್ಥಳಗಳಿಂದ ಆತನನ್ನು ಬೇಸರಗೊಳಿಸಿ,
ವಿಗ್ರಹಗಳಿಂದ ರೇಗಿಸಿದರು.
೫೯ ದೇವರು ಇದನ್ನು ತಿಳಿದು ರೌದ್ರನಾಗಿ
ಇಸ್ರಾಯೇಲರನ್ನು ಸಂಪೂರ್ಣವಾಗಿ ನಿರಾಕರಿಸಿಬಿಟ್ಟನು.
೬೦ ತಾನು ಜನರ ಮಧ್ಯದಲ್ಲಿ ವಾಸಿಸುವುದಕ್ಕೋಸ್ಕರ,
ಶಿಲೋವಿನಲ್ಲಿ ಹಾಕಿಸಿದ ಗುಡಾರವನ್ನು ತ್ಯಜಿಸಿಬಿಟ್ಟು,
೬೧ ತನ್ನ ಪ್ರತಾಪವನ್ನು ಸೆರೆಯಾಗುವುದಕ್ಕೂ,
ಮಹಿಮೆಯನ್ನು ವಿರೋಧಿಗಳಿಗೂ ಒಪ್ಪಿಸಿಬಿಟ್ಟನು.
೬೨ ಆತನು ತನ್ನ ಪ್ರಜೆಯನ್ನು ಖಡ್ಗಕ್ಕೆ ಗುರಿಮಾಡಿ,
ತನ್ನ ಬಾಧ್ಯತೆಯ ಮೇಲೆ ಉಗ್ರನಾದನು.
೬೩ ಅವರ ಯೌವನಸ್ಥರು ಅಗ್ನಿಗೆ ಆಹುತಿಯಾದರು;
ಅವರ ಕನ್ಯೆಯರು ವಿವಾಹವಾಗಲಿಲ್ಲ.
೬೪ ಯಾಜಕರು ಕತ್ತಿಯಿಂದ ಸಂಹೃತರಾದರು;
ಇವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸಲಿಲ್ಲ.
೬೫ ಆ ವರೆಗೆ ನಿದ್ರಿಸುವವನಂತೆಯೂ,
ದ್ರಾಕ್ಷಾರಸದಿಂದ ಮೈಮರೆತ ವೀರನಂತೆಯೂ ಇದ್ದ ಕರ್ತನು ಫಕ್ಕನೆ ಎಚ್ಚತ್ತು,
೬೬ ತನ್ನ ಶತ್ರುಗಳನ್ನು ಸದೆಬಡಿದು,
ನಿತ್ಯನಿಂದೆಗೆ ಅವರನ್ನು ಗುರಿಮಾಡಿದನು.
೬೭ ಯೋಸೇಫ ಕುಲದ ಗುಡಾರವನ್ನು ತಿರಸ್ಕರಿಸಿ,
ಎಫ್ರಾಯೀಮ್ ಕುಲವನ್ನು ತ್ಯಜಿಸಿ,
೬೮ ಯೆಹೂದ ಕುಲವನ್ನೂ ಮತ್ತು ತನ್ನ ಪ್ರಿಯವಾದ ಚೀಯೋನ್ ಗಿರಿಯನ್ನೂ ಆರಿಸಿಕೊಂಡನು.
೬೯ ಆತನು ತನ್ನ ಆಲಯವನ್ನು ಪರ್ವತದಂತೆಯೂ,
ತಾನು ಸ್ಥಾಪಿಸಿದ ಭೂಮಿಯಂತೆಯೂ ಶಾಶ್ವತವಾಗಿ ಕಟ್ಟಿದನು.
೭೦ ಇದಲ್ಲದೆ ಆತನು ತನ್ನ ಸೇವಕನಾದ ದಾವೀದನನ್ನು ಆರಿಸಿಕೊಂಡು,
ಕುರಿಹಟ್ಟಿಯಿಂದ ತೆಗೆದುಕೊಂಡು,
೭೧ ಕುರಿಮರಿಗಳನ್ನು ರಕ್ಷಿಸುವ ಕೆಲಸದಿಂದ ಬಿಡಿಸಿ,
ಅವನನ್ನು ತನ್ನ ಪ್ರಜೆಗಳಾದ ಯಾಕೋಬ್ಯರನ್ನು ಅಂದರೆ
ತನ್ನ ಸ್ವಾಸ್ತ್ಯವಾಗಿರುವ ಇಸ್ರಾಯೇಲರನ್ನು ಸಾಕುವುದಕ್ಕೆ ನೇಮಿಸಿದನು.
೭೨ ಇವನು ಅವರನ್ನು ಯಥಾರ್ಥಹೃದಯದಿಂದ ಸಾಕಿ,
ತನ್ನ ಹಸ್ತಕೌಶಲ್ಯದಿಂದ ನಡೆಸಿದನು.