ಯೆಹೋವನು ತನ್ನ ಭಕ್ತರನ್ನು ಶತ್ರುಗಳಿಂದ ಬಿಡಿಸುವನೆಂಬ ನಿರೀಕ್ಷೆ
೧೨೯
ಯಾತ್ರಾಗೀತೆ.
(ಕೀರ್ತ. 124)
 
೧ “ನಮ್ಮ ಯೌವನ ಕಾಲದಿಂದ ಶತ್ರುಗಳು ನಮ್ಮನ್ನು ಹಲವು ಸಾರಿ ಬಾಧಿಸಿದ್ದಾರೆ”
ಎಂದು ಇಸ್ರಾಯೇಲರು ಹೇಳಲಿ.
೨ “ನಾವು ಯೌವನ ಕಾಲದಿಂದ ಎಷ್ಟೋ ಸಾರಿ ಬಾಧೆ ಹೊಂದಿದರೂ,
ಅವರು ನಮ್ಮನ್ನು ಜಯಿಸಲಿಲ್ಲ.
೩ ಉಳುವವರು ನಮ್ಮ ಬೆನ್ನಿನ ಮೇಲೆ ಉಳುತ್ತಾ,
ಉದ್ದವಾದ ಗೆರೆಗಳನ್ನು ಹಾಕಿದರು.”
೪ ಆದರೆ ನೀತಿಸ್ವರೂಪನಾದ ಯೆಹೋವನು,
ದುಷ್ಟರು ಹಾಕಿದ ಬಂಧನಗಳನ್ನು ಛೇದಿಸಿಬಿಟ್ಟನು.
೫ ಚೀಯೋನನ್ನು ದ್ವೇಷಿಸುವವರೆಲ್ಲರೂ ಅವಮಾನದಿಂದ ಹಿಂದಿರುಗಲಿ.
೬ ಅವರು ಮಾಳಿಗೆಯ ಮೇಲಣ ಹುಲ್ಲಿನಂತಾಗಲಿ;
ಅದು ಹೂವು ಬಿಡುವುದಕ್ಕೆ ಮೊದಲೇ ಒಣಗಿಹೋಗುತ್ತದೆ;
೭ ಅದನ್ನು ಕೊಯ್ಯುವವನ ಹಿಡಿಯೂ,
ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ.
೮ ಹಾದುಹೋಗುವವರು, “ಯೆಹೋವನು ನಿಮ್ಮನ್ನು ಆಶೀರ್ವದಿಸಲಿ ಎಂದು,
ಯೆಹೋವನ ನಾಮದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ” ಎಂದೂ ಹೇಳುವುದಿಲ್ಲ.