ಬಲಾತ್ಕಾರ ದುಷ್ಪ್ರೇರಣೆಗಳಿಂದ ತಪ್ಪಿಸಬೇಕೆಂಬ ಪ್ರಾರ್ಥನೆ
೧೪೧
ದಾವೀದನ ಕೀರ್ತನೆ.
(ಕೀರ್ತ. 140)
 
೧ ಯೆಹೋವನೇ, ಮೊರೆಯಿಡುತ್ತೇನೆ,
ಬೇಗನೆ ಬಾ, ನಾನು ಮೊರೆಯಿಡುವಾಗ ನನ್ನ ಕೂಗನ್ನು ಲಾಲಿಸು.
೨ ನನ್ನ ಪ್ರಾರ್ಥನೆಯು ಧೂಪದಂತೆಯೂ,
ನಾನು ಕೈಯೆತ್ತುವುದು ಸಂಧ್ಯಾನೈವೇದ್ಯದಂತೆಯೂ ನಿನಗೆ ಸಮರ್ಪಕವಾಗಲಿ.
೩ ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು,
ನನ್ನ ತುಟಿಗಳೆಂಬ ಕದವನ್ನು ಕಾಯಿ.
೪ ನನ್ನ ಹೃದಯವು ದುರಾಚಾರವನ್ನು ಮೆಚ್ಚದಂತೆಯೂ,
ನಾನು ದುಷ್ಟರೊಡನೆ ಸೇರಿ ಕೆಟ್ಟ ಕೆಲಸಗಳನ್ನು ನಡೆಸದಂತೆಯೂ ನನ್ನನ್ನು ಕಾಪಾಡು.
ಅವರ ಮೃಷ್ಟಾನ್ನವು ನನಗೆ ಬೇಡವೇ ಬೇಡ.
೫ ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗೆ ಉಪಕಾರ,
ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ,
ನನ್ನ ತಲೆಯು ಅದನ್ನು ಬೇಡವೆನ್ನದಿರಲಿ.
ಆದರೆ ದುಷ್ಟರ ಕೆಟ್ಟತನಕ್ಕೆ ವಿರುದ್ಧವಾಗಿ ದೇವರನ್ನು ಪ್ರಾರ್ಥಿಸುತ್ತಿರುವೆನು.
೬ ಅವರ ಪ್ರಮುಖರು ಕಡುಬಂಡೆಯಿಂದ ಕೆಳಕ್ಕೆ ದೊಬ್ಬಲ್ಪಟ್ಟ ಮೇಲೆ,
ಜನರು ನನ್ನ ಮಾತುಗಳಿಗೆ ಕಿವಿಗೊಡುವರು,
ಅವು ಅವರಿಗೆ ಹಿತವಾಗಿರುವವು.
೭ ಒಬ್ಬನು ಹೊಲವನ್ನು ಉಳುತ್ತಾ,
ಹೆಂಟೆಗಳನ್ನು ಒಡೆದು ಚದರಿಸುವ ಪ್ರಕಾರವೇ,
ನಮ್ಮ ಎಲುಬುಗಳು ಪಾತಾಳದ್ವಾರದಲ್ಲಿ ಚದರಿಸಲ್ಪಟ್ಟಿರುತ್ತವೆ.
೮ ಕರ್ತನೇ, ಯೆಹೋವನೇ, ನನ್ನ ದೃಷ್ಟಿ ನಿನ್ನಲ್ಲಿದೆ,
ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ,
ನನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಬೇಡ.
೯ ಕೆಡುಕರ ಉರುಲಿನಲ್ಲಿ ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು,
ಅವರು ಬೀಸಿಟ್ಟಿರುವ ಬಲೆಯಿಂದ ನನ್ನನ್ನು ತಪ್ಪಿಸು.
೧೦ ದುಷ್ಟರು ತಮ್ಮ ಬಲೆಯಲ್ಲಿ ತಾವೇ ಬಿದ್ದುಹೋಗಲಿ,
ಆಗ ನಾನು ತಪ್ಪಿಸಿಕೊಳ್ಳುವೆನು.