ಇಕ್ಕಟ್ಟಿನಲ್ಲಿದ್ದವನ ಪ್ರಾರ್ಥನೆ
೧೪೨
ದಾವೀದನ ಪದ್ಯ, ಅವನು ಗುಹೆಯಲ್ಲಿ ಅಡಗಿಕೊಂಡಿದ್ದಾಗ ಮಾಡಿದ ಪ್ರಾರ್ಥನೆ.
(ಕೀರ್ತ. 140; 1 ಸಮು. 22; 24)
 
೧ ನಾನು ಯೆಹೋವನಿಗೆ ಮೊರೆಯಿಡುವೆನು,
ಯೆಹೋವನಿಗೆ ಕೂಗಿ ಬಿನ್ನೈಸುವೆನು.
೨ ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು,
ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡುವೆನು.
೩ ನನ್ನ ಆತ್ಮವು ಕುಂದಿಹೋದಾಗ,
ನೀನು ನನ್ನ ಮಾರ್ಗವನ್ನು ಬಲ್ಲವನಾಗಿರುತ್ತಿ,
ನಾನು ಹೋಗಬೇಕಾದ ದಾರಿಯಲ್ಲಿ ಅವರು ಉರುಲನ್ನೊಡ್ಡಿದ್ದಾರೆ.
೪ ನಾನು ನನ್ನ ಬಲಗಡೆಗೆ ನೋಡಲು,
ಅಲ್ಲಿ ಸಹಾಯಕರು ಯಾರೂ ಇಲ್ಲ,
ಆಶ್ರಯವೂ ನಾಶವಾಯಿತು,
ನನ್ನ ಪ್ರಾಣಕ್ಕೆ ಹಿತಚಿಂತಕರು ಒಬ್ಬರೂ ಇಲ್ಲ.
೫ ಯೆಹೋವನೇ, ನಾನು ನಿನಗೆ, “ನೀನೇ ನನ್ನ ಶರಣನೂ,
ಜೀವಲೋಕದಲ್ಲಿ ನನ್ನ ಪಾಲೂ ಆಗಿದ್ದಿ” ಎಂದು ಕೂಗಿ ಮೊರೆಯಿಟ್ಟಿದ್ದೇನೆ.
೬ ನನ್ನ ಕೂಗನ್ನು ಲಾಲಿಸು, ಬಲು ಕುಗ್ಗಿಹೋಗಿದ್ದೇನೆ.
ಹಿಂಸಕರ ಕೈಯಿಂದ ನನ್ನನ್ನು ತಪ್ಪಿಸು,
ಅವರು ನನಗಿಂತ ಬಲಿಷ್ಠರಾಗಿದ್ದಾರಲ್ಲಾ.
೭ ಸೆರೆಯಿಂದ ನನ್ನನ್ನು ಬಿಡಿಸು,
ನಿನ್ನ ನಾಮವನ್ನು ಕೀರ್ತಿಸುವೆನು.
ನೀತಿವಂತರು ನಿನ್ನ ಮಹೋಪಕಾರಕ್ಕಾಗಿ,
ನನ್ನನ್ನು ಸುತ್ತಿಕೊಂಡು ಉತ್ಸಾಹಗೊಳ್ಳುವರು.