ನಾಲ್ಕು ರಥಗಳ ಕನಸು
೧ ನಂತರ ನಾನು ಕಣ್ಣೆತ್ತಿ ನೋಡಲು, ಇಗೋ, ಎರಡು ಬೆಟ್ಟಗಳ ನಡುವೆಯಿಂದ ಬರುತ್ತಿರುವ ನಾಲ್ಕು ರಥಗಳು ಕಾಣಿಸಿದವು. ಅ ಬೆಟ್ಟಗಳು ತಾಮ್ರದವುಗಳಾಗಿದ್ದವು. ೨ ಮೊದಲನೆಯ ರಥಕ್ಕೆ ಕೆಂಪು ಕುದುರೆಗಳು; ಎರಡನೆಯ ರಥಕ್ಕೆ ಕಪ್ಪು ಕುದುರೆಗಳು; ೩ ಮೂರನೆಯ ರಥಕ್ಕೆ ಬಿಳಿ ಕುದುರೆಗಳು; ನಾಲ್ಕನೆಯ ರಥಕ್ಕೆ ಮಚ್ಚೆ ಮಚ್ಚೆಯ ಬಲವಾದ ಕುದುರೆಗಳು ಕಟ್ಟಿದ್ದವು. ೪ ಆಗ ನನ್ನ ಸಂಗಡ ಮಾತನಾಡಿದ ದೇವದೂತನಿಗೆ, “ನನ್ನ ಸ್ವಾಮೀ ಇದೇನು?” ಎಂದೆನು.
೫ ಆ ದೇವದೂತನು ನನಗೆ, “ಇವು ಆಕಾಶದ ನಾಲ್ಕುಗಾಳಿಗಳು (ಆತ್ಮ); ಭೂಲೋಕದ ಒಡೆಯನ ಸನ್ನಿಧಾನದಲ್ಲಿ ನಿಂತಿದ್ದು ಅಲ್ಲಿಂದ ಹೊರಟು ಬರುತ್ತಾ ಇವೆ” ಎಂದು ಉತ್ತರಕೊಟ್ಟನು. ೬ ಅನಂತರ ಕಪ್ಪು ಕುದುರೆಗಳ ರಥ ಉತ್ತರದೇಶಕ್ಕೆ ಹೊರಟವು. ಬಿಳಿ ಕುದುರೆಗಳು ಅವುಗಳನ್ನು ಪಶ್ಚಿಮಕ್ಕೆ ಹಿಂಬಾಲಿಸಿದವು. ಮಚ್ಚೆ ಮಚ್ಚೆಯ ಕುದುರೆಗಳ ರಥ ದಕ್ಷಿಣ ದೇಶಕ್ಕೆ ಹೋದವು.
೭ ಕೆಂಪು ಕುದುರೆಗಳು ಬಂದು ಲೋಕದಲ್ಲಿ ಸಂಚರಿಸುವುದಕ್ಕೆ ಹೊರಡಬೇಕೆಂದು ತ್ವರೆಪಟ್ಟವು; ಆಗ ಅವನು, “ಹೊರಡಿರಿ, ಲೋಕದಲ್ಲಿ ಸಂಚರಿಸಿರಿ” ಎಂದು ಅಪ್ಪಣೆ ಮಾಡಲು ಅವು ಲೋಕದಲ್ಲಿ ಸಂಚರಿಸಿದವು. ೮ ಆ ಮೇಲೆ ಅವನು ನನಗೆ, “ಆಹಾ, ಉತ್ತರ ದೇಶಕ್ಕೆ ಹೋದವುಗಳು ಅಲ್ಲಿ ನನ್ನ ಕೋಪವನ್ನು ಶಾಂತಿಗೊಳಿಸಿವೆ” ಎಂದು ಕೂಗಿ ಹೇಳಿದನು.
ಇಸ್ರಾಯೇಲಿನ ಮುಂದಿನ ರಾಜ್ಯಭಾರ
೯ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, ೧೦ ಇನ್ನು ಸೆರೆಯಲ್ಲಿರುವವರೊಳಗೆ ಸೇರಿದವರಾದ ಹೆಲ್ದಾಯ, ತೋಬೀಯ ಮತ್ತು ಯೆದಾಯ ಎಂಬುವರ ಕೈಯಿಂದ ಬೆಳ್ಳಿ ಬಂಗಾರಗಳನ್ನು ತೆಗೆದುಕೋ; ಈ ದಿನವೇ ನೀನು ಹೋಗಿ ಬಾಬೆಲಿನಿಂದ ಬಂದು, ಇವರು ಇಳಿದುಕೊಂಡಿರುವ ಚೆಫನ್ಯನ ಮಗನಾದ ಯೋಷಿಯನ ಮನೆಗೆ ಹೋಗಿ, ೧೧ ಇವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಕಿರೀಟವನ್ನು ಮಾಡಿ ಯೆಹೋಚಾದಾಕನ ಮಗನೂ ಹಾಗೂ ಮಹಾಯಾಜಕನು ಆದ ಯೆಹೋಶುವನ ತಲೆಯ ಮೇಲೆ ಇಟ್ಟು,
೧೨ ಅವನಿಗೆ ಹೀಗೆ ಹೇಳು, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ,
‘ಇಗೋ, ಮೊಳಿಕೆಯೆಂಬ ಪುರುಷನು! ಅವನು ಇದ್ದಲ್ಲಿಯೇ ವೃದ್ಧಿಯಾಗಿ,
ಯೆಹೋವನ ಆಲಯವನ್ನು ಕಟ್ಟಿಸುವನು.
೧೩ ಹೌದು, ಅವನೇ ಯೆಹೋವನ ಆಲಯವನ್ನು ಕಟ್ಟಿಸಿ ರಾಜವೈಭವವನ್ನು ಹೊಂದಿಕೊಂಡು ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು.
ಮತ್ತು ಯಾಜಕರು ತನ್ನ ಸಿಂಹಾಸನದಲ್ಲಿ ಕುಳಿತಿರುವರು. ಅವರಿಬ್ಬರೂ ಸಮ್ಮತಿಸಮಾಧಾನದಿಂದ ಇರುವರು.
೧೪ “ ‘ಆ ಕಿರೀಟವು ಹೇಲೆಮ್, ತೋಬೀಯ, ಯೆದಾಯ, ಚೆಫನ್ಯನ ಮಗನಾದ ಹೇನ್ ಇವರ ಜ್ಞಾಪಕಾರ್ಥವಾಗಿ ಯೆಹೋವನ ಆಲಯದಲ್ಲಿ ಇಡಲಾಗಿದೆ. ೧೫ ದೂರದಲ್ಲಿರುವವರು ಬಂದು ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಕೈಹಾಕುವರು; ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದಾತನು ಸೇನಾಧೀಶ್ವರನಾದ ಯೆಹೋವನೇ ಎಂದು ನಿಮಗೆ ದೃಡವಾಗುವುದು. ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮನಃಪೂರ್ವಕವಾಗಿ ಕೇಳಿದರೆ ಇದೆಲ್ಲಾ ನೆರವೇರುವುದು.’ ”