ಯೆಹೋವನ ಶರಣರಿಗೆ ದುರ್ಗತಿಯಿಲ್ಲ 
 ೧೧
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು. 
 ೧ ನಾನು ಯೆಹೋವನನ್ನು ಆಶ್ರಯಿಸಿಕೊಂಡಿದ್ದೇನೆ. ನೀವು, “ಪಕ್ಷಿಗಳಂತೆ ನಿಮ್ಮ ಬೆಟ್ಟಗಳಿಗೆ ಓಡಿಹೋಗಿರಿ” ಎಂದು ಹೇಳುವುದೇಕೆ? 
 ೨ ದುಷ್ಟರು ಕತ್ತಲಲ್ಲಿ ಯಥಾರ್ಥ ಹೃದಯವುಳ್ಳವರನ್ನು ಕೊಲ್ಲಬೇಕೆಂದು ಬಿಲ್ಲುಬೊಗ್ಗಿಸಿ, 
ಹೆದೆಗೆ ಬಾಣವನ್ನು ಹೂಡಿದ್ದಾರೆ ನೋಡಿರಿ. 
 ೩ ಆಧಾರಗಳೇ ಕೆಡವಲ್ಪಟ್ಟ ಮೇಲೆ ನೀತಿವಂತನ ಗತಿ ಏನಾದೀತು? 
 ೪ ಯೆಹೋವನು ತನ್ನ ಪರಿಶುದ್ಧಮಂದಿರದಲ್ಲಿದ್ದಾನೆ; 
ಆತನು ತನ್ನ ಸಿಂಹಾಸನವನ್ನು ಪರಲೋಕದಲ್ಲಿ ಸ್ಥಾಪಿಸಿದ್ದಾನೆ. 
ಆತನ ಕಣ್ಣುಗಳು ಮಾನವರನ್ನು ನೋಡುತ್ತವೆ; 
ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ. 
 ೫ ಯೆಹೋವನು ನೀತಿವಂತರನ್ನು ಮತ್ತು ಅನೀತಿವಂತರನ್ನು ಪರೀಕ್ಷಿಸುತ್ತಾನೆ; 
ಬಲಾತ್ಕಾರವನ್ನು ಪ್ರೀತಿಸುವವರನ್ನು ಆತನು ದ್ವೇಷಿಸುತ್ತಾನೆ. 
 ೬ ಆತನು ದುಷ್ಟರ ಮೇಲೆ ಬೆಂಕಿ ಗಂಧಕಗಳನ್ನು ಸುರಿಸಲಿ. 
ಉರಿಗಾಳಿಗಳನ್ನು ಅವರಿಗೆ ಪಾನವಾಗಮಾಡಲಿ. 
 ೭ ಏಕೆಂದರೆ ನೀತಿಸ್ವರೂಪನಾದ ಯೆಹೋವನು ನೀತಿಯನ್ನು ಮೆಚ್ಚುವವನಾಗಿದ್ದಾನೆ. 
ಸಜ್ಜನರು ಆತನ ಸಾನಿಧ್ಯವನ್ನು ಸೇರುವರು.