ದುಷ್ಟಾಧಿಕಾರದಲ್ಲಿ ಭಕ್ತನು ಪ್ರಾರ್ಥಿಸುವುದು 
 ೧೨
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮಂದರಸ್ಥಾಯಿಯೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ. 
 ೧ ಯೆಹೋವನೇ, ರಕ್ಷಿಸು; ಭಕ್ತರು ಮುಗಿದು ಹೋಗಿದ್ದಾರೆ. 
ಜನರೊಳಗೆ ನಂಬಿಗಸ್ತರನ್ನು ಕಾಣುವುದೇ ಇಲ್ಲ. 
 ೨ ಪ್ರತಿಯೊಬ್ಬರು ನೆರೆಯವರೊಡನೆ ಸುಳ್ಳನ್ನಾಡುತ್ತಾರೆ, 
ಅವರು ವಂಚನೆಯ ತುಟಿಗಳಿಂದ ಹೊರಗೊಂದು ಒಳಗೊಂದು ಮಾತನಾಡುತ್ತಾರೆ. 
 ೩ ಯೆಹೋವನು ವಂಚನೆಯ ತುಟಿಗಳನ್ನೂ, ಬಡಾಯಿ ನಾಲಿಗೆಯನ್ನೂ ಕಡಿದುಬಿಡಲಿ. 
 ೪ ಅವರು, “ನಮ್ಮ ಮಾತುಗಳಿಗೆ ತಡೆಯಿಲ್ಲವಲ್ಲಾ; 
ನಮ್ಮ ತುಟಿಗಳು ನಮ್ಮವೇ; ನಮಗೆ ಒಡೆಯನು ಯಾರು?” ಎಂದು ಹೇಳಿಕೊಳ್ಳುತ್ತಾರಲ್ಲಾ. 
 ೫ ಯೆಹೋವನು, “ಕುಗ್ಗಿದವರ ಬಾಧೆಯನ್ನು ನೋಡಿದ್ದೇನೆ; 
ಗತಿಯಿಲ್ಲದವರ ನರಳುವಿಕೆಯು ನನಗೆ ಕೇಳಿಸಿತು. 
ಈಗ ಎದ್ದು ಬಂದು ಅವರ ಇಷ್ಟಾರ್ಥವನ್ನು ನೆರವೇರಿಸುವೆನು. 
ಅವರು ಬಯಸಿದಂತೆ ಅವರನ್ನು ಸುರಕ್ಷಿತವಾಗಿ ಇರಿಸುವೆನು” ಎಂದು ಹೇಳುತ್ತಾನೆ. 
 ೬ ಯೆಹೋವನ ಮಾತುಗಳು ಯಥಾರ್ಥವಾದವುಗಳೇ; 
ಅವು ಏಳು ಸಾರಿ ಪುಟಕ್ಕೆ ಹಾಕಿದ ಚೊಕ್ಕ ಬೆಳ್ಳಿಯೋಪಾದಿಯಲ್ಲಿವೆ. 
 ೭ ಜನರಲ್ಲಿ ಎಲ್ಲೆಲ್ಲೂ ನೀಚರೇ ತುಂಬಿಕೊಂಡಿದ್ದರೂ, 
ಜನರೊಳಗೆ ದುಷ್ಟತ್ವ ಆಳ್ವಿಕೆಗೆ ಬಂದಿದ್ದರೂ, 
 ೮ ಯೆಹೋವನೇ, ನೀನು ಅವರನ್ನು ನೋಡಿದ್ದಿ, 
ನೀನು ನಿನ್ನ ಭಕ್ತರನ್ನು ದುಷ್ಟರಿಂದ ಸದಾಕಾಲವೂ ತಪ್ಪಿಸಿ ಕಾಪಾಡುವಿ.